ADVERTISEMENT

‘ಚುನಾವಣಾ ಕಾರ್ಯದ ನೆಪ: ಸರ್ಕಾರಿ ಸೇವೆ ವಿಳಂಬ’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:57 IST
Last Updated 1 ಡಿಸೆಂಬರ್ 2019, 10:57 IST
ತಾಲ್ಲೂಕು ಕಚೇರಿಯ ಕೌಂಟರ್‌ನಲ್ಲಿ ಜನರ ಸರದಿಸಾಲು
ತಾಲ್ಲೂಕು ಕಚೇರಿಯ ಕೌಂಟರ್‌ನಲ್ಲಿ ಜನರ ಸರದಿಸಾಲು   

ಕೆ.ಆರ್.ಪುರ: ಲೋಕಸಭಾ ಚುನಾವಣಾ ಕಾರ್ಯಕ್ಕೆ ತಾಲ್ಲೂಕು ತಹಶೀಲ್ದಾರ್‌ ಕಚೇರಿಯ ಎಲ್ಲ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವುದರಿಂದ ಸಾರ್ವಜನಿಕರು ಸಕಾಲಕ್ಕೆ ಸರ್ಕಾರಿ ಸೇವೆಗಳನ್ನು ಪಡೆಯಲು ಆಗುತ್ತಿಲ್ಲ.

ಜಾತಿ, ಆದಾಯ ಪ್ರಮಾಣ ಪತ್ರ, ಖಾತೆ ಬದಲಾವಣೆ, ಜಮೀನಿಗೆ ಸಂಬಂಧಪಟ್ಟ ಪೋಡಿ, ಭೂ–ದಾಖಲೆ ಪಡೆಯಲು ಜನರು ಪರದಾಡುತ್ತಿದ್ದಾರೆ.

‘ಸಿಬ್ಬಂದಿ ಚುನಾವಣೆ ಕಾರ್ಯದ ನೆಪ ಹೇಳಿಕೊಂಡು ಕಚೇರಿಗೆ ತಡವಾಗಿ ಬರುತ್ತಿದ್ದಾರೆ. ಇದರಿಂದ ಸರ್ಕಾರಿ ಪ್ರಮಾಣಪತ್ರಗಳಿಗಾಗಿ ಕಾದು–ಕಾದು ಮಹಿಳೆಯರು, ಹಿರಿಯ ನಾಗರಿಕರು ದಣಿಯುತ್ತಿದ್ದಾರೆ’ ಎಂದು ಕಚೇರಿ ಕೆಲಸಕ್ಕೆ ಬಂದಿದ್ದವರೊಬ್ಬರು ದೂರಿದರು.

ADVERTISEMENT

ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಬೆಳಿಗ್ಗೆ 7 ಗಂಟೆಗೆ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಇಲ್ಲಿ ಒಂದೇ ಕೌಂಟರ್ ಇರುವುದರಿಂದ ಜನಸಂದಣಿಯು ಹೆಚ್ಚಿರುತ್ತದೆ. ಇಲ್ಲಿಗೆ ಮಹದೇವಪುರ, ಸರ್ವಜ್ಞನಗರ, ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಜನರು ಸರ್ಕಾರಿ ಸೇವಾ ದಾಖಲೆಗಳಿಗೆ ಬರುತ್ತಾರೆ.

‘ಕಚೇರಿಯ 22 ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ. ಹಾಗಾಗಿ ಜನರಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ಚುನಾವಣಾ ಕೆಲಸದ ನೆಪ ಹೇಳಿಕೊಂಡು ಕಚೇರಿಗೆ ತಡವಾಗಿ ಬರುವ ಕೆಲವು ಅಧಿಕಾರಿಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿ, ಕ್ರಮ ವಹಿಸುತ್ತೇನೆ’ ಎಂದು ಕೆ.ಆರ್‌.ಪುರ ಪೂರ್ವ ತಾಲ್ಲೂಕು ತಹಶೀಲ್ದಾರ್‌ ರಾಮಲಕ್ಷ್ಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.