
ಸುನಿಲ್ ಜೋಶಿ
ಬೆಂಗಳೂರು: ಕರ್ನಾಟಕದ ದಿಗ್ಗಜ ಕ್ರಿಕೆಟಿಗ, ಕೋಚ್ ಸುನಿಲ್ ಜೋಶಿ ಅವರ ಹೆಸರನ್ನು ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರಿಕೆಟ್ ಮೈದಾನದ ಪೆವಿಲಿಯನ್ ಬ್ಲಾಕ್ಗೆ ಇಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ತೀರ್ಮಾನಿಸಿದೆ.
ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಫೈನಲ್ನ ಮೊದಲ ದಿನವಾದ ಫೆ.24ರಂದು ಹುಬ್ಬಳ್ಳಿ
ಯಲ್ಲಿ ನಾಮಕರಣ ಸಮಾರಂಭ ನಡೆಯಲಿದೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಡಗೈ ಸ್ಪಿನ್ನರ್ ಆಗಿದ್ದ ಜೋಶಿ ಅವರು ಕರ್ನಾಟಕದ ಪರ 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಭಾರತ ತಂಡಕ್ಕೆ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
‘ಜೋಶಿ ಅವರು ಕ್ರಿಕೆಟ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮತ್ತು ಉತ್ತರ ಕರ್ನಾಟಕದಲ್ಲಿ ಕ್ರಿಕೆಟ್ನೊಂದಿಗಿನ ನಿರಂತರ ಒಡನಾಟಕ್ಕೆ ಗೌರವ ಮತ್ತು ಮೆಚ್ಚುಗೆಯ ಸಂಕೇತವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗದಗ ಜಿಲ್ಲೆಯವರಾದ ಅವರು ಹುಬ್ಬಳ್ಳಿಯಲ್ಲಿ ತಮ್ಮ ರಚನಾತ್ಮಕ ಕ್ರಿಕೆಟ್ನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅತ್ಯಂತ ವಿಶಿಷ್ಟ ಕ್ರಿಕೆಟ್ ರಾಯಭಾರಿ
ಗಳಲ್ಲಿ ಒಬ್ಬರಾದ ಅವರಿಗೆ ಈ ಮೂಲಕ ಶಾಶ್ವತವಾದ ಗೌರವ ನೀಡಲಾಗುತ್ತದೆ’ ಎಂದು ಕೆಎಸ್ಸಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.