
ಬೆಂಗಳೂರು: ಕುವೆಂಪು ಅವರ ವಿಶ್ವಮಾನವ ಸಂದೇಶ ಅರ್ಥ ಮಾಡಿಕೊಂಡರೆ ದೇಶ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.
ಕನ್ನಡ ಜನಶಕ್ತಿ ಕೇಂದ್ರ–ಕಾವ್ಯ ಸಂಜೆ, ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಕವಿ ಕುವೆಂಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರಿಂದ ಆಡಳಿತ ನಡೆಸುವ ಉನ್ನತ ಸ್ಥಾನದಲ್ಲಿ ಇರುವವರೂ ವಿಶ್ವಮಾನವ ಸಂದೇಶ ಅರ್ಥಮಾಡಿಕೊಳ್ಳಬೇಕು. ಅಳವಡಿಸಿಕೊಳ್ಳಬೇಕು ಎನ್ನುವುದು ಕುವೆಂಪು ಅವರ ಆಶಯವಾಗಿತ್ತು. ದೇಶಪ್ರೇಮ ಎನ್ನುವುದು ಅಹಂಕಾರವಾದರೆ ಹಿಂಸೆಗೆ ದಾರಿ ಮಾಡಿಕೊಡುತ್ತದೆ. ಅಂತಹ ಹಿಂಸೆಯಿಂದ ಶಾಂತಿ, ನೆಮ್ಮದಿಯ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂದರು.
ಪ್ರಸ್ತುತ ಒಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಇಂತಹ ಆತಂಕಗಳು ದೂರವಾಗಿ ಜಾತಿ, ಧರ್ಮಗಳ ಗೊಡವೆ ಇಲ್ಲದೇ ಬದುಕು ಸಾಗಿಸಬೇಕಿದೆ ಎಂದರು.
ಇದೇ ವೇಳೆ ಕುವೆಂಪು ಕವಿಗೋಷ್ಠಿ ನಡೆಯಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಚಿಂತಕರಾದ ಎಸ್.ಮಹಾದೇವಯ್ಯ, ಎಂ.ತಿಮ್ಮಯ್ಯ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕಾವ್ಯ ಸಂಜೆ ಪ್ರಧಾನ ಸಂಚಾಲಕಿ ಮಮತಾ ಸಾಗರ್, ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.