ADVERTISEMENT

ಮೇಲ್ಸೇತುವೆ ನಿರ್ಮಾಣದ ವೇಳೆ ಕಾರ್ಮಿಕ ದುರ್ಮರಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:11 IST
Last Updated 15 ಜೂನ್ 2020, 14:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲ್ಸೇತುವೆ ನಿರ್ಮಾಣದ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸುರ್ಜಾದಾಸ್ (35) ಎಂಬುವರು ದುರ್ಮರಣಕ್ಕೀಡಾಗಿದ್ದಾರೆ.

'ಒಡಿಶಾದ ಸುರ್ಜಾದಾಸ್, ಇಟ್ಟುಮಡು ಮುಖ್ಯರಸ್ತೆಯಲ್ಲಿ ಸ್ನೇಹಿತರ ಜೊತೆ ವಾಸವಿದ್ದರು. ಮೇಲ್ಸೇತುವೆ ನಿರ್ಮಾಣದಲ್ಲಿ ಗುತ್ತಿಗೆದಾರ ಬಿಸ್ವಾಸ್ ಬಳಿ ಗಾರೆ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ರಾಜಕಾಲುವೆ ಪಕ್ಕದ ವಿದ್ಯುತ್ ಕಂಬಕ್ಕೆ ತಂತಿಯನ್ನು ಕಟ್ಟಿ, ಅದರ ಮೂಲಕವೇ ವಿದ್ಯುತ್ ಪಡೆದುಕೊಂಡು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಜೂನ್ 15ರಂದು ರಾತ್ರಿ 11.45ರ ಸುಮಾರಿಗೆ ಕೆಲಸ ಮುಗಿದ ನಂತರ ಸುರ್ಜಾದಾಸ್, ಸ್ವಿಚ್ ಬೋರ್ಡ್‌ನಿಂದ ತಂತಿ ತೆಗೆಯಲು ಹೋದಾಗ ವಿದ್ಯುತ್ ತಗುಲಿತ್ತು.’

ADVERTISEMENT

‘ತೀವ್ರ ಗಾಯಗೊಂಡಿದ್ದ ಅವರನ್ನು ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದೂ ಪೊಲೀಸರು ತಿಳಿಸಿದರು.

‘ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಶಾಶ್ವತ ವಿದ್ಯುತ್ ಸಂಪರ್ಕವೂ ಇರಲಿಲ್ಲ. ರಾತ್ರಿಯೂ ಕಾರ್ಮಿಕರಿಂದ ಒತ್ತಾಯದಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಗುತ್ತಿಗೆದಾರ ಬಿಸ್ವಾಸ್‌ನ ನಿರ್ಲಕ್ಷ್ಯವೇ ಸುರ್ಜಾದಾಸ್ ಅವರ ಸಾವಿಗೆ ಕಾರಣವೆಂದು ಸಹೋದ್ಯೋಗಿ ದೂರು ನೀಡಿದ್ದಾರೆ. ಬಿಸ್ವಾಸ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.