ಬೆಂಗಳೂರು: ‘ಅಲೆಮಾರಿ ಬುಡಕಟ್ಟು ಹಿನ್ನೆಲೆಯ ಬಂಜಾರರು ಮುಖ್ಯವಾಹಿನಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ತಿಳಿಸಿದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಪ್ರಜಾಕೀಯ ಆಶ್ರಮ ಆಯೋಜಿಸಿದ್ದ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಲೆ, ಸಾಹಿತ್ಯ, ನಾಟಕದಂತಹ ಸಾಂಸ್ಕೃತಿಕ ವಲಯದಲ್ಲಿ ಯುವಕರು ಗುರುತಿಸಿಕೊಳ್ಳಬೇಕು. ಸಾಮಾಜಿಕ ಜಾಗೃತಿ, ಅರಿವು, ವ್ಯಕ್ತಿತ್ವ ವಿಕಸನ, ಜನಪರ ಕಾಳಜಿ, ಪರಿಸರ ಕಾಳಜಿ ಅಗತ್ಯ’ ಎಂದು ಹೇಳಿದರು.
‘ಬಂಜಾರ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಖ್ಯವಾಹಿನಿಗೆ ತರಲು ಅಕಾಡೆಮಿ ಅಧ್ಯಕ್ಷರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಾಹಿತ್ಯ ರಚನಾ ತರಬೇತಿ ಕಾರ್ಯಾಗಾರದಲ್ಲಿ ಬಂಜಾರರ ಜೊತೆಗೆ ಇತರರಿಗೂ ಸಮಾನ ಅವಕಾಶ ನೀಡಿರುವುದು ಶ್ಲಾಘನೀಯ’ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ಪ್ರಕಾಶ್ ಹೇಳಿದರು.
ಪ್ರಜಾಕೀಯ ಆಶ್ರಮದ ರಾಹುಲ್ ಗುಳಿ, ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್. ಸದಾಶಿವಯ್ಯ, ಶಿಬಿರದ ನಿರ್ದೇಶಕರಾದ ಛಾಯಾ ಭಾರ್ಗವಿ, ಅಕಾಡೆಮಿ ಸಹ ಸದಸ್ಯ ಗಿರೀಶ್ ನಾಯ್ಕ್, ಬಂಜಾರ ಸಮುದಾಯದ ಮುಖಂಡರಾದ ಬಿ. ರವಿನಾಯಕ್, ಚಂದ್ರನಾಯಕ್, ಸೌಂದರ್ಯ, ಪ್ರೊ. ಶಿವಣ್ಣ ನಾಯ್ಕ್, ರಂಗಕರ್ಮಿ ಮೈಕೊ ಶಿವಶಂಕರ್, ಪರಮೇಶ್ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.