ADVERTISEMENT

ಬೆಂಗಳೂರು ಅರಮನೆ ಮೈದಾನದ ರಸ್ತೆ ವಿಸ್ತರಣೆಗೆ ಯದುವೀರ್‌ ಭೂಮಿ ಬಿಟ್ಟುಕೊಡಲಿ: ಎಎಪಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 15:16 IST
Last Updated 19 ಏಪ್ರಿಲ್ 2024, 15:16 IST
ಎಎಪಿ
ಎಎಪಿ   

ಬೆಂಗಳೂರು: ಇಲ್ಲಿನ ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಯದುವೀರ್ ಒಡೆಯರ್ ಮೈದಾನದ ಖಾಲಿ ಭೂಮಿಯನ್ನು ಬಿಟ್ಟುಕೊಡುವ ಮೂಲಕ ಹೃದಯ ವೈಶಾಲ್ಯ ಮೆರೆಯಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಯದುವೀರ್‌ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ ರಸ್ತೆ ವಿಸ್ತರಣೆಗೆ ನೆರವಾಗುವ ಮೂಲಕ ಜನಾನುರಾಗಿಗಳಾಗಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸರ್ಕಾರ ಅರಮನೆ ಮೈದಾನಕ್ಕೆ ಕೌಂಪೌಂಡ್ ಹಾಕಿದ್ದು, ಪರಿಹಾರವನ್ನು ನೀಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಯದುವೀರ್‌ ನ್ಯಾಯಾಲಯಕ್ಕೆ ಹೋಗಿದ್ದಾರೆ. ಮೇ 17ರ ಒಳಗೆ ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ನೀಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸುವಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರವನ್ನು ತಂದೊಡ್ಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

400 ಮೀಟರ್‌ ರಸ್ತೆ ವಿಸ್ತರಣೆಗೆ ಅರಮನೆಗೆ ಸೇರಿದ 15.39 ಎಕರೆ ಭೂಮಿಗೆ ₹ 1,400 ಕೋಟಿ ಮೌಲ್ಯದ ಟಿಡಿಆರ್‌ ನೀಡಲು ಸರ್ಕಾರ ಒಪ್ಪಿದೆ. ರೈತರ ಭೂಮಿ ವಶಪಡಿಸಿಕೊಂಡಾಗಲೂ ಇದೇ ರೀತಿ ದೊಡ್ಡಮೊತ್ತದ ಪರಿಹಾರವನ್ನು ಸರ್ಕಾರ ನೀಡುತ್ತದೆಯೇ? ಅರ್ಕಾವತಿ, ಕೆಂಪೇಗೌಡ, ಶಿವರಾಮ ಕಾರಂತ ಮುಂತಾದ ಬಡಾವಣೆಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರು ಇಂದಿಗೂ ಕೋರ್ಟ್‌ ಕಚೇರಿ ಅಲೆಯುತ್ತಿದ್ದಾರೆ ಎಂದು ಎಎಪಿ ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ದರ್ಶನ್ ಜೈನ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.