
ಕಾರ್ಯಕ್ರಮದಲ್ಲಿ ಸಿ.ನಾಗಭೂಷಣ, ನವಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ಸಿದ್ಧನಗೌಡ ಪಾಟೀಲ, ವೀರಣ್ಣ ರಾಜೂರ, ಸಿ. ವೀರಣ್ಣ ಮತ್ತು ನವಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೇಮಚಂದ್ರ ಉಪಸ್ಥಿತರಿದ್ದರು
ಬೆಂಗಳೂರು: ‘ಬಸವಾದಿ ಶರಣರು ರೂಪಿಸಿದ ಲಿಂಗಾಯತ ಧರ್ಮದ ಪರಿಕಲ್ಪನೆ ಈಗ ವೀರಶೈವವಾಗಿ ರೂಪುಗೊಂಡಿದೆ’ ಎಂದು ವಿದ್ವಾಂಸ ವೀರಣ್ಣ ರಾಜೂರ ಹೇಳಿದರು.
ನವಕರ್ನಾಟಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ. ವೀರಣ್ಣ ಅವರ ‘ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ–3’ ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಪುರಾಣ ಪುರುಷರನ್ನಾಗಿಸಲಾಗಿದೆ. ಸಾಮಾಜಿಕ, ಸಾಹಿತ್ಯಿಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ. ವೀರಣ್ಣ ಅವರು ವಚನ ಸಾಹಿತ್ಯದಲ್ಲಿ ಆದ ಬದಲಾವಣೆಗಳನ್ನು ಬಹಳ ಸೂಕ್ಷ್ಮವಾಗಿ ಗುರುತಿಸಿದ್ದಾರೆ ಎಂದು ತಿಳಿಸಿದರು.
ಸಂಶೋಧಕ ಸಿ.ನಾಗಭೂಷಣ ಮಾತನಾಡಿ, ‘ಸಿ.ವೀರಣ್ಣ ಅವರು ಸಮಾಜ ಮತ್ತು ಸಾಹಿತ್ಯವನ್ನು ಸಮಾಜೋ ವೈಜ್ಞಾನಿಕ ಮನೋ ಭೂಮಿಕೆಯಲ್ಲಿ ವಿಶ್ಲೇಷಿಸುವ ಉದ್ದೇಶದಿಂದ ತಮ್ಮ ಕೃತಿಗಳನ್ನು ‘ಪ್ರಾಚೀನ ಸಾಹಿತ್ಯ’, ‘ಮಧ್ಯಕಾಲೀನ ಸಾಹಿತ್ಯ’, ‘ರಾಜಸತ್ತೆಯ ನಿಶ್ತೇಜದ ಕಾಲ’, ‘ವಸಾಹತು ಶಾಹಿಯ ಕಾಲ’, ‘ಬಂಡವಾಳಶಾಹಿಯ ಯುಗ’ ಎಂಬ ಐದು ವರ್ಗಗಳಾಗಿ ವಿಂಗಡಿಸಿದ್ದಾರೆ’ ಎಂದರು.
‘ಮಧ್ಯಕಾಲೀನ ಸಾಹಿತ್ಯ ಕೃತಿಯಲ್ಲಿ ಕವಿಗಳ ಕುರಿತ ವಸ್ತುನಿಷ್ಠ ಪ್ರತಿಕ್ರಿಯೆ, ಚಾರಿತ್ರಿಕ ದೃಷ್ಟಿಕೋನ, ಪ್ರಮಾಣಬದ್ಧ ಅಭಿಪ್ರಾಯ ಅಡಕವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವುಗಳು ಹೆಸರನ್ನೇ ಕೇಳಿರದ, ಮೈಸೂರು-ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯಲ್ಲಿ ಚರ್ಚೆಯಾಗದಿರುವ ಅಲಕ್ಷಿತ ಸಾಹಿತ್ಯದ ಕವಿಗಳನ್ನು ಈ ಸಂಪುಟಗಳಲ್ಲಿ ಗುರುತಿಸುವ ಮೂಲಕ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಪಾಟೀಲ, ಕೃತಿಯ ಲೇಖಕ ಸಿ.ವೀರಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.