ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ಪಿರ್ಸಪ್ಪಾಡ್’ ಬ್ಯಾರಿ ಸಾಂಸ್ಕೃತಿಕ ಸಂಭ್ರಮದಲ್ಲಿ ಅತಿಥಿಗಳು
ಪ್ರಜಾವಾಣಿ ಚಿತ್ರ
ಪ
ಬೆಂಗಳೂರು: ಸಾಹಿತ್ಯ ಕೇವಲ ಭಾಷೆಯಲ್ಲ, ಜನಜೀವನ, ಸಂಸ್ಕೃತಿಯನ್ನು ನೋಡುವ ಕಿಟಕಿ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.
ನಗರದಲ್ಲಿ ಶುಕ್ರವಾರ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ‘ಪಿರ್ಸಪ್ಪಾಡ್’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಪೋಷಕರು ಸಾಹಿತ್ಯಾಭಿರುಚಿ ಬೆಳೆಸಬೇಕು. ಅವರನ್ನು ಸಾಹಿತ್ಯ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಆಗ ಸಾಹಿತ್ಯದ ಅಭಿರುಚಿ ಬೆಳೆಯುವುದರ ಜೊತೆಗೆ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ’ ಎಂದು ಸಲಹೆ ನೀಡಿದರು.
‘ಬ್ಯಾರಿ ಸಾಂಸ್ಕೃತಿಕ ಸಂಘಗಳಲ್ಲಿ ನಾನು ಕೆಲಸ ಮಾಡಿದ್ದರಿಂದ ಇಂದು ವಿಧಾನಸಭೆ ಅಧ್ಯಕ್ಷನಾಗಿದ್ದೇನೆ. ಅಂದು ಸಿಕ್ಕಿದ್ದ ಧೈರ್ಯವೇ ಇಂದು ಸದನದಲ್ಲಿ ಅಧ್ಯಕ್ಷನಾಗಿ ಮಾತನಾಡಲು ಸಾಧ್ಯವಾಗಿದೆ’ ಎಂದು ತಿಳಿಸಿದರು.
‘ಬ್ಯಾರಿಗಳು ಸ್ವಾಭಿಮಾನಿಗಳು, ಶ್ರಮಜೀವಿಗಳು. ಕಷ್ಟಪಟ್ಟು ದುಡಿದು ಕುಟುಂಬ ಸಲಹುವವರು. ಈಗ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವುದು ಸಮುದಾಯಕ್ಕೆ ಹೆಮ್ಮೆ ತರುವ ವಿಚಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್ ಸೇರಿ ಪದಾಧಿಕಾರಿಗಳ ಪದಗ್ರಹಣವೂ ಇದೇ ವೇಳೆ ನಡೆಯಿತು.
ಬ್ಯಾರಿ ಸಂಪ್ರದಾಯದ ದಫ್ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಉದ್ಯಮಿ ಹಾಗೂ ಬ್ಯಾರೀಸ್ ವೆಲ್ಫೇರ್ ಅಸೊಶಿಯೇಶನ್ ಪದಾಧಿಕಾರಿ ಟಿ.ಕೆ ಉಮರ್, ಬ್ಯಾರಿಸ್ ಸೆಂಟ್ರಲ್ ಕಮಿಟಿ ಆಧ್ಯಕ್ಷರು ಶಬೀರ್ ಬ್ರಿಗೇಡ್, ಎಂಎಂವೈಸಿ ಅಧ್ಯಕ್ಷರು ಅಬೂಬಕರ್ ಸೇರಿ ಹಲವು ಗಣ್ಯರು ಇದ್ದರು.
ಅಕಾಡೆಮಿಯ ಸದಸ್ಯೆ ಸಾರಾ ಅಲಿ ಪರ್ಲಡ್ಕ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿಯ ಪರಿಚಯ ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.