ಬೆಂಗಳೂರು: ಲಾಕ್ಡೌನ್ ಮುಗಿದ ತಕ್ಷಣವೇ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು ಕಂಡುಬರಲಿವೆ.
ನಗದು ರಹಿತ (ಕ್ಯಾಸ್ಲೆಸ್) ಮತ್ತು ಸಂಪರ್ಕ ರಹಿತ (ಟಚ್ಲೆಸ್) ಟಿಕೆಟಿಂಗ್ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್ಸಿಎಲ್) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಪ್ರಾಧಿಕಾರ (ಬಿಎಂಟಿಸಿ) ಮುಂದಾಗಿವೆ.
ನಗದು ಹಾಗೂ ಸಂಪರ್ಕ ರಹಿತ ಟಿಕೆಟಿಂಗ್ ವ್ಯವಸ್ಥೆಯು ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸುವುದಲ್ಲದೇ, ಕೋವಿಡ್-19ನಂತಹ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ಸಂಪರ್ಕ ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ಡೌನ್ ಮುಗಿಯುವುದಕ್ಕೆ ಮುನ್ನವೇ ಈ ವ್ಯವಸ್ಥೆಗಳ ಅನುಷ್ಠಾನವಾಗಬೇಕು ಮತ್ತು ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಸಿದ್ದಪಡಿಸಬೇಕೆಂದು ಬಿಎಂಆರ್ಸಿಎಲ್ ಮತ್ತು ಬಿಎಂಟಿಸಿಗಳಿಗೆ ತಜ್ಞರು ಒತ್ತಾಯಿಸಿದ್ದಾರೆ.
ಬಿಎಂಟಿಸಿ, ಮೆಟ್ರೊ ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೂ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಬಳಸಬಹುದು. ಇದನ್ನುಬೆಂಗಳೂರು ಮಹಾನಗರ ಸಂಪರ್ಕ ಸಾರಿಗೆ ಸಂಸ್ಥೆಗಳು ಪರಸ್ಫರ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ವ್ಯವಸ್ಥೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಅವಿನಾಶ್ ವರ್ಮಾ ಹೇಳಿದ್ದಾರೆ.
ತಜ್ಞರ ಸಲಹೆಗಳನ್ನು ಪರಿಗಣಿಸಿರುವ ಬಿಎಂಟಿಸಿ ಮತ್ತು ಬಿಎಂಆರ್ಸಿಎಲ್ಗಳು ನಗದು ಹಾಗೂ ಸಂಪರ್ಕ ರಹಿತ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.