ADVERTISEMENT

ನಗದು ವಹಿವಾಟು: ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 16:07 IST
Last Updated 18 ಮಾರ್ಚ್ 2024, 16:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೇ ಚುನಾವಣಾ ವಿಭಾಗದ ಗಮನಕ್ಕೆ ತರಬೇಕೆಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಅವರು ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಒಂದೇ ಖಾತೆಯಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆಯಾದರೆ ಅದರ ಮಾಹಿತಿಯನ್ನು ನಮಗೆ ಕೊಡಬೇಕು. ಮಾಹಿತಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ನೀವೇ ಜವಾಬ್ದಾರರಾಗುತ್ತೀರಿ. ಅಲ್ಲದೇ ಚುನಾವಣಾ ಆಯೋಗದಿಂದ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಯಾವುದೇ ಪೂರ್ವ ನಿರ್ದೇಶನವಿಲ್ಲದೆ ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಹಲವಾರು ವ್ಯಕ್ತಿಗಳ ಖಾತೆಗಳಿಗೆ ಒಂದು ಬ್ಯಾಂಕ್ ಖಾತೆಯಿಂದ ಆರ್.ಟಿ.ಜಿ.ಎಸ್/ನೆಫ್ಟ್ ಮೂಲಕ ಹೆಚ್ಚು ಹಣ ವರ್ಗಾವಣೆ ಮಾಡುವುದು, ನಗದು ಠೇವಣಿ ಅಥವಾ ₹1 ಲಕ್ಷಕ್ಕಿಂತ ಹೆಚ್ಚಿನ ನಗದು ಹಿಂಪಡೆಯುವಿಕೆ, ಮತದಾರರಿಗೆ ಹಣ ನೀಡಲು ಬಳಸಬಹುದಾದ ಯಾವುದೇ ಅನುಮಾನಾಸ್ಪದ ನಗದು ವಹಿವಾಟುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಚುನಾವಣಾ ವಿಭಾಗಕ್ಕೆ ತಕ್ಷಣ ನೀಡಬೇಕೆಂದು ಸೂಚಿಸಿದರು.

ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮೊತ್ತ ₹10 ಲಕ್ಷಕ್ಕಿಂತ ಹೆಚ್ಚಿದ್ದರೆ, ಅಂತಹ ಮಾಹಿತಿಯನ್ನು ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಗೆ ಮಾಹಿತಿ ರವಾನಿಸಲಾಗುವುದು ಎಂದರು.

ಚುನಾವಣಾ ವಿಭಾಗದ ಸಹಾಯಕ ಆಯುಕ್ತ ರಾಮಚಂದ್ರ ನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಬೀನಾ, ವಿವಿಧ ಬ್ಯಾಂಕ್‌ಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.