ADVERTISEMENT

ಪಾರಂಪರಿಕ ಸ್ಥಳ ಗುರುತಿಗೆ ಸಮಿತಿ ರಚಿಸಿ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 15:45 IST
Last Updated 20 ಸೆಪ್ಟೆಂಬರ್ 2023, 15:45 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಲು ಅರ್ಹವಾದ ಅನೇಕ ಸ್ಥಳಗಳು ಕರ್ನಾಟಕದಲ್ಲಿದ್ದು, ಅವುಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಪುರಾತತ್ವ ಇಲಾಖೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು’ ಎಂದು ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಮನವಿ ಮಾಡಿದ್ದಾರೆ. 

ಹೊಯ್ಸಳರು ರೂಪಿಸಿದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ವಾಸ್ತಶಿಲ್ಪ ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ‘ಈವರೆಗೆ ಕರ್ನಾಟಕದ ಹಂಪಿ ಮತ್ತು ಪಟ್ಟದಕಲ್ಲು ಮಾತ್ರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದವು. ಈಗ ಮೂರನೆಯದಾಗಿ ಹೊಯ್ಸಳ ವಾಸ್ತುಶಿಲ್ಪ ಈ ಪಟ್ಟಿಯನ್ನು ಸೇರಿದೆ. 2012ರಿಂದ ಪಶ್ಚಿಮ ಘಟ್ಟಗಳು ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಯಲ್ಲಿ, 2014ರಿಂದ ಶ್ರೀರಂಗಪಟ್ಟಣ ಮತ್ತು ಬಹುಮನಿ ವಾಸ್ತುಶಿಲ್ಪ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿವೆ. ಅವುಗಳ ಪರಿಶೀಲನೆಯೂ ಆದಷ್ಟು ಬೇಗ ನಡೆದು, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಬೇಕು. ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

‘ಹೊಯ್ಸಳ ರಾಜ ಮನೆತನವು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಲೆಂದೇ ರೂಪುಗೊಂಡಂತಹ ರಾಜಮನೆತನವಾಗಿದ್ದು, ಇದು ಕನ್ನಡ ರಾಜ್ಯದ ವ್ಯಾಪ್ತಿ ಮತ್ತು ಪರಿಕಲ್ಪನೆಯನ್ನು ಗಮನಾರ್ಹವಾಗಿ ಹಿಗ್ಗಿಸಿತ್ತು. ಈ ರಾಜ ಮನೆತನದ ಆಳ್ವಿಕೆಯಲ್ಲಿ ಕನ್ನಡದ ಕಲೆ ಮತ್ತು ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ದೊರಕಿತ್ತು’ ಎಂದು ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.