
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಬೆಂಗಳೂರು: ಪಾನಮತ್ತ ಕಾರು ಚಾಲಕರೊಬ್ಬರು ನಾಲ್ವರು ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ಸಹಕಾರ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.
ದೊಡ್ಡಬೊಮ್ಮಸಂದ್ರದ ಸುನಿಲ್ಕುಮಾರ್ ಹಾಗೂ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿಯ ವಿರುದ್ಧ ಸಹಕಾರನಗರ ಸಂಚಾರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿ ಗಂಗಾಧರ್ ಗುರವ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕೊಡಿಗೇಹಳ್ಳಿ ಅಕ್ಕಮ್ಮ, ಚಂದ್ರಶೇಖರ್, ರಾಜಲಕ್ಷ್ಮಿ, ಪ್ರಜ್ವಲ್ ಅವರು ಗಾಯಗೊಂಡಿದ್ದಾರೆ.
ಮಾಲ್ ಆಫ್ ಏಷ್ಯಾದ ಗೇಟ್ ನಂ. 3ರ ಬಳಿ ಬುಧವಾರ ರಾತ್ರಿ 10.15ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನರ ಸಂಚಾರ ಹೆಚ್ಚಿತ್ತು. ಮಾಲ್ ಆಫ್ ಏಷ್ಯಾ ಆವರಣದಿಂದ ಕಾರು ಅತಿವೇಗವಾಗಿ ಬಂದು ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಬ್ಯಾರಿಕೇಡ್ಗೆ ಏಕಾಏಕಿ ಡಿಕ್ಕಿ ಹೊಡೆದಿತ್ತು. ಅದಾದ ಮೇಲೆ ಪಾದಚಾರಿ ಮಾರ್ಗದಲ್ಲಿ ತೆರಳುತ್ತಿದ್ದ ನಾಲ್ವರಿಗೂ ಡಿಕ್ಕಿ ಹೊಡೆದಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಕಾರು ಚಾಲಕ ಮದ್ಯದ ಅಮಲಿನಲ್ಲಿ ಪಾದಚಾರಿ ಮಾರ್ಗಕ್ಕೆ ಕಾರು ಹತ್ತಿಸಿದ್ದಾರೆ. ಮಾಲ್ಗೆ ಬರುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಘಟನೆಗೆ ಕಾರಣವಾಗಿದೆ. ಚಾಲಕ ಸುನಿಲ್ ಕುಮಾರ್ ಹಾಗೂ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿ ವಿರುದ್ಧ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.