ADVERTISEMENT

ತಾಯಿಗೆ ಸ್ಮಾರಕ | ಎಲ್ಲರಿಗೂ ವಿನೋದ್‌ ಮಾದರಿ: ಸಚಿವ ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 16:18 IST
Last Updated 5 ಡಿಸೆಂಬರ್ 2024, 16:18 IST
ಸಚಿವ ಕೆ.ಎಚ್ ಮುನಿಯಪ್ಪ ಸ್ಮಾರಕಕ್ಕೆ ಪುಷ್ಪ ಸಮರ್ಪಿಸಿದರು
ಸಚಿವ ಕೆ.ಎಚ್ ಮುನಿಯಪ್ಪ ಸ್ಮಾರಕಕ್ಕೆ ಪುಷ್ಪ ಸಮರ್ಪಿಸಿದರು   

ನೆಲಮಂಗಲ: ‘ತಾಯಿಗೆ ದೇಗುಲ ರೀತಿಯ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಲೀಲಾವತಿ ಅವರ ಪುತ್ರ ವಿನೋದ್‌ರಾಜ್ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ತಾಯಿಯ ಋಣ ತೀರಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಸೋಲದೇವನಹಳ್ಳಿಯಲ್ಲಿ ‘ಡಾ.ಎಂ.ಲೀಲಾವತಿ ದೇಗುಲ’ ಸ್ಮಾರಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಾಯಿ‌–ಮಗನ ಬಾಂಧವ್ಯಕ್ಕೆ ಲೀಲಾವತಿ ಹಾಗೂ ಪುತ್ರ ವಿನೋದ್‌ರಾಜ್ ಅವರು ಸಾಕ್ಷಿಯಾಗಿದ್ದಾರೆ. ತಂದೆ–ತಾಯಿ ಇರುವಾಗಲೇ ಮರೆಯುವವರಿರುವಾಗ ವಿನೋದ್ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಭಾಗದ ಜನರ ಶ್ರೇಯೋವೃದ್ದಿಗೆ ಹಾಗೂ ಸಂಕಷ್ಟ ಸ್ಪಂದಿಸುವ ಕಾರ್ಯವನ್ನು ಲೀಲಾವತಿ ಅವರು ಮಾಡುತ್ತಿದ್ದರು. ಅವರ ಕಾರ್ಯವನ್ನು ಪುತ್ರ ವಿನೋದ್‌ರಾಜ್ ಮುಂದುವರೆಸುತ್ತಿರುವುದು ಸ್ವಾಗತಾರ್ಹ’ ಎಂದರು

ADVERTISEMENT

ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಲೀಲಾವತಿ ಅಮ್ಮನವರು ಸಾಕಷ್ಟು ದಶಕ ಕಲಾ ಕ್ಷೇತ್ರದಲ್ಲಿ ಕಲೆಯ ಮೂಲಕ ಜನರ ಮನದಲ್ಲಿ ಸಾಂಸ್ಕೃತಿಕ ಚಿಂತನೆಯನ್ನು ನೆಲೆಸುವಂತೆ ಮಾಡಿದ್ದಾರೆ. ಮಾತೃದೇವೋ ಭವ ಎಂಬಂತೆ ತಾಯಿ ಸ್ಥಾನ ಅಂತ್ಯತ ಪವಿತ್ರ ಸ್ಥಾನ. ತಾಯಿ ಹೆಸರಿನಲ್ಲಿ ದೇವಾಲಯ ನಿರ್ಮಾಣದ ಜತೆಗೆ ಸಮಾಜ ಕಾರ್ಯಕ್ಕೆ ಮುಂದಾಗಿರುವ ಪುತ್ರ ವಿನೋದ್ ರಾಜ್ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಬಸವಣ್ಣ ದೇವರ ಮಠದ‌ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ‘ಲೀಲಾವತಿ ಅವರು ಮಾಡಿರುವ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ತಾಯಿ ನೆನಪಿಯಾಗಿ ಸಾಕಷ್ಟು ಸಮಾಜ ಮುಖಿ‌ ಕಾರ್ಯಗಳೊಂದಿಗೆ ದೇಗುವ ನಿರ್ಮಾಣ ಮಾಡಿದ್ದು ಸಂತೋಷಕರ ‌ಸಂಗತಿ’ ಎಂದರು.

‘ತಾಯಿ ಅವರ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಾಣ ಮಾಡಿದ್ದೇನೆ. ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ಅದು ಒಂದು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇವೆ. ಪ್ರತಿನಿತ್ಯ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ನಟ ವಿನೋದ್‌ರಾಜ್ ತಿಳಿಸಿದರು.‌

ರಕ್ತದಾನ ಶಿಬಿರ: ಲೀಲಾವತಿ ಅವರ ದೇಗುಲ‌ ಉದ್ಘಾಟನಾ ಸಮಾರಂಭದ ಅಂಗವಾಗಿ ಅಮೂಲ್ಯ ಸ್ವಯಂ ಪ್ರೇರಿತ ರಕ್ತ ಕೇಂದ್ರದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 80 ಯೂನಿಟ್‌ ರಕ್ತ ಸಂಗ್ರಹವಾಯಿತು.

ಕಲಾವಿದರಾದ ಕುಮಾರ್‌ಗೋವಿಂದ್, ಅಭಿಜಿತ್, ಗಿರಿಜಾಲೋಕೇಶ್, ಪದ್ಮವಾಸಂತಿ, ಲಕ್ಷ್ಮೀ ದೇವಮ್ಮ ಬ್ಯಾಂಕ್‌ಜನಾರ್ದನ್, ಹೊನ್ನಹಳ್ಳಿ ಕೃಷ್ಣ, ಸುದರ್ಶನ್, ಸುಮಿತ್ರಾಗುರು ನಿರ್ದೇಶಕ ಉಮೇಶ್, ಮುದ್ದುರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್‌ನಾಯಕ್, ಯಂಟಗಾನಹಳ್ಳಿ ಗ್ರಾ.ಪಂ ಅದ್ಯಕ್ಷ ರಾಹುಲ್‌ಗೌಡ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್‌ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ಉದ್ಯಮಿ ಚಿಕ್ಕಹನುಮೇಗೌಡ, ಮುಖಂಡ ಮಂಜುನಾಥಯ್ಯ, ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.