ಬೆಂಗಳೂರು: ‘ಸ್ನೇಹದೀಪ ಅಂಗವಿಕಲರ ಸಂಸ್ಥೆ’ಯ ವತಿಯಿಂದ ರಾಜ್ಯಮಟ್ಟದ ಪ್ರತಿಭಾನ್ವೇಷಣೆ–2026 ಕಾರ್ಯಕ್ರಮವು ಮಲ್ಲೇಶ್ವರದ 19ನೇ ಅಡ್ಡರಸ್ತೆಯ ರಜತಭವನದಲ್ಲಿ ಈಚೆಗೆ ನಡೆಯಿತು.
ಪ್ರತಿಭಾನ್ವೇಷಣೆಯಲ್ಲಿ 550ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆ ಗಾಯನ, ನೃತ್ಯ, ವಾದ್ಯ, ಮಿಮಿಕ್ರಿ, ಏಕಪಾತ್ರಾಭಿನಯ... ಹೀಗೆ ಹಲವು ಸ್ಪರ್ಧೆಗಳು ಜರುಗಿದವು.
ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ , ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಉಚಿತವಾಗಿ ಕಾಲೇಜು ಬ್ಯಾಗ್ ಮತ್ತು ನಡೆಯಲು ಅಂಧರು ಬಳಸುವ ಕೇನ್(ವಾಕಿಂಗ್ ಸ್ಟಿಕ್) ವಿತರಿಸಲಾಯಿತು.
ಪ್ರತಿಭಾನ್ವೇಷಣೆಯಲ್ಲಿ ರಾಣೇಬೆನ್ನೂರಿನ ಸ್ನೇಹದೀಪ ಸಂಸ್ಥೆ ಪ್ರಥಮ ಹಾಗೂ ಬೆಂಗಳೂರಿನ ‘ಬೆಳಕು’ ಅಕಾಡೆಮಿ ದ್ವಿತೀಯ ಸ್ಥಾನ ಪಡೆಯಿತು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದರು.
ಸ್ನೇಹದೀಪ ಸಂಸ್ಥೆಗೆ ಸಂತೋಷ್ ಲಾಡ್ ಪ್ರತಿಷ್ಠಾನದಿಂದ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಸ್ನೇಹದೀಪ ಅಂಗವಿಕಲರ ಸಂಸ್ಥೆಯ ಧರ್ಮದರ್ಶಿ ಪಾಲ್ ಮುದ್ದಾ, ಕೆ.ಜಿ.ಮೋಹನ್, ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ, ನೀಲಾ ಕಿಶೋರ್, ನಟಿ ರಾಗಿಣಿ ದ್ವಿವೇದಿ, ಮೈಸೂರು ರಮಾನಂದ್ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.