ಬೆಂಗಳೂರು: ನಗರದ ಮಳಿಗೆಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ಟಾಪ್ ಕಳವು ಮಾಡಿಕೊಂಡು ದೆಹಲಿಗೆ ರೈಲಿನಲ್ಲಿ ಹೊರಟಿದ್ದ ಆರೋಪಿಗಳು ಹುಬ್ಬಳ್ಳಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
‘ಕಾಡುಗೋಡಿ ದಿಣ್ಣೂರು ನಿವಾಸಿ ಎನ್. ಮಂಜುನಾಥ್ (20) ಹಾಗೂ ಹೂಡಿ ನಿವಾಸಿ ಸೌರವ್ ಕುಮಾರ್ (20) ಬಂಧಿತರು. ಅವರಿಂದ ₹ 5 ಲಕ್ಷ ಮೌಲ್ಯದ 39 ಮೊಬೈಲ್ಗಳು. ಲ್ಯಾಪ್ಟಾಪ್ಗಳು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮಹದೇವಪುರ, ವೈಟ್ಫೀಲ್ಡ್, ಹೊಸಕೋಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಮಳಿಗೆಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ರಾತ್ರಿ ವೇಳೆ ಮಳಿಗೆ ಬೀಗ ಮುರಿದು ಒಳ ನುಗ್ಗುತ್ತಿದ್ದರು. ಮೊಬೈಲ್, ಲ್ಯಾಪ್ಟಾಪ್ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು.’
‘ಕದ್ದ ವಸ್ತುಗಳನ್ನು ಮಾರಾಟ ಮಾಡಲು ಆರೋಪಿಗಳು, ದೆಹಲಿಗೆ ರೈಲಿನಲ್ಲಿ ಹೊರಟಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಮಹದೇವಪುರ ಪೊಲೀಸರ ತಂಡ, ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು. ಹುಬ್ಬಳ್ಳಿ ಮೂಲಕ ರೈಲು ಹೊರಡುವುದನ್ನು ತಿಳಿದಿದ್ದ ತಂಡ, ಅಲ್ಲಿಯ ರೈಲು ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿತ್ತು. ಅವರ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ತಿಳಿಸಿದರು.
'ಆರೋಪಿ ಮಂಜುನಾಥ್, ತನ್ನ ಸ್ನೇಹಿತೆಯಾಗಿದ್ದ ಯುವತಿಯನ್ನೂ ಜೊತೆಗೆ ಕರೆದೊಯ್ಯುತ್ತಿದ್ದ. ಆಕೆಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.