
ಬೆಂಗಳೂರು: ಅಂಗವಿಕಲರ ನೆರವಿಗಾಗಿ ‘ಮೊಬಿಲಿಟಿ ಅಸಿಸ್ಟ್’ ಸಾಧನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಚಯಿಸಲಾಗಿದೆ.
ಎಚ್ಸಿಜಿ ಆಸ್ಪತ್ರೆಯ ಸಂಸ್ಥಾಪಕ ಡಾ. ಬಿ.ಎಸ್. ಅಜಯಕುಮಾರ್ ಅವರು ಮಗ ಆದರ್ಶ್ ಸ್ಮರಣಾರ್ಥ ಕೊಡುಗೆ ನೀಡಿದ್ದಾರೆ. ಈ ಸೌಲಭ್ಯ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
‘ಮಕ್ಕಳು ಸೇರಿದಂತೆ ಪ್ರಯಾಣದ ವೇಳೆ ಹೆಚ್ಚಿನ ಸಹಾಯದ ಅಗತ್ಯವಿರುವವರು, ಕಡಿಮೆ ಚಲನಶೀಲತೆ ಹೊಂದಿರುವವರಿಗೆ ಸುರಕ್ಷಿತ, ಸುಗಮವಾಗಿ ವಿಮಾನದ ಬೋರ್ಡಿಂಗ್ ಮಾಡಲು ಮತ್ತು ವಿಮಾನದಿಂದ ಇಳಿಯಲು ಅತ್ಯಾಧುನಿಕವಾಗಿ ಬೆಂಬಲ ನೀಡುವ ವ್ಯವಸ್ಥೆಯಾಗಿ ಇದು ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದೆ.
ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮಾತನಾಡಿ, ‘ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬರಿಗೂ ಸಮಾನ ಸೌಕರ್ಯ ನೀಡುವುದು ನಮ್ಮ ಉದ್ದೇಶ. ಮೊಬಿಲಿಟಿ ಅಸಿಸ್ಟ್ ಪರಿಚಯದ ಮೂಲಕ ಅಂಗವಿಕಲರು ಸುಲಲಿತವಾಗಿ ತೆರಳಲು ಸಹಕಾರಿಯಾಗಿದೆ. ಪ್ರಯಾಣಿಕರ ಆರೈಕೆಗೆ ಹೊಸ ಸಾಧನ ಸೇರ್ಪಡೆಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.