ADVERTISEMENT

ಪಿ.ಯು ಕಾಲೇಜುಗಳಿಗೆ ಅರ್ಜಿಗಳ ಮಹಾಪೂರ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು, ಪೋಷಕರು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 19:30 IST
Last Updated 11 ಆಗಸ್ಟ್ 2020, 19:30 IST
ಜಯನಗರ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಜಿ ಪಡೆಯುತ್ತಿರುವ ಪೋಷಕರು –ಪ್ರಜಾವಾಣಿ ಚಿತ್ರ
ಜಯನಗರ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಜಿ ಪಡೆಯುತ್ತಿರುವ ಪೋಷಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಲೇಜು ಸೇರುವ ತವಕದಲ್ಲಿ ವಿದ್ಯಾರ್ಥಿಗಳಿದ್ದು, ಪದವಿಪೂರ್ವ ಕಾಲೇಜುಗಳಿಗೆ ಆನ್‌ಲೈನ್‌ನಲ್ಲಿ ರಾಶಿ ರಾಶಿ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ಬಹುತೇಕ ಖಾಸಗಿ ಕಾಲೇಜುಗಳು ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುತ್ತಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ಪೋಷಕರು ಮುಳುಗಿದ್ದಾರೆ.

ವಿಜ್ಞಾನ ವಿಭಾಗಕ್ಕೆ ಅದರಲ್ಲೂ ಪಿಸಿಎಂಬಿ ಕೋರ್ಸ್‌ಗೆ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ವಾಣಿಜ್ಯ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಇದೆ. ಆದರೆ, ಮಕ್ಕಳನ್ನು ಪಿಸಿಎಂಬಿ ಕೋರ್ಸ್‌ಗೆ ಸೇರಿಸಲೇಬೇಕು ಎಂದು ಪೋಷಕರು ನಾಮುಂದು ತಾಮುಂದು ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ.

ADVERTISEMENT

ಕೆಲ ಕಾಲೇಜುಗಳಿಗೆ ಸೋಮವಾರವೇ ಎರಡರಿಂದ ಮೂರು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಮಂಗಳವಾರ ಈ ಸಂಖ್ಯೆ 10 ಸಾವಿರ ದಾಟಿದೆ. ಕಾಲೇಜಿಗೆ ಹೋಗಿಯೇ ಅರ್ಜಿ ಸ್ವೀಕರಿಸಬೇಕಾದ ಸ್ಥಿತಿ ಈ ವರ್ಷ ಇಲ್ಲದ ಕಾರಣ ಪೋಷಕರು ನಾಲ್ಕೈದು ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಕುಳಿತಲ್ಲೇ ಅರ್ಜಿ ಸಲ್ಲಿಸುತ್ತಿದ್ದಾರೆ.

‘ಎಲ್ಲಾ ಕಾಲೇಜುಗಳಿಗೂ ಆನ್‌ಲೈನ್‌ನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳೆಲ್ಲ ದಾಖಲಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ತಮ್ಮ ನೆಚ್ಚಿನ ಕಾಲೇಜುಗಳಲ್ಲಿ ಅವಕಾಶ ಸಿಗದಿದ್ದವರು ಬೇರೆ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಣ್ಣ–ಪುಟ್ಟ ಕಾಲೇಜುಗಳಿಗೂ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ’ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

‘ಕೋವಿಡ್ ಕಾರಣದಿಂದ ಆನ್‌ಲೈನ್‌ ಪಾಠ ನಡೆಯಲಿದ್ದು, ಎಲ್ಲಾ ಖಾಸಗಿ ಪಿಯು ಕಾಲೇಜುಗಳಿಗೂ ಸಮಾನ ಶುಲ್ಕ ನಿಗದಿ ಮಾಡಲು ಸರ್ಕಾರ ಮಾರ್ಗಸೂಚಿ ಹೊರಡಿಸುವುದು ಸೂಕ್ತ’ ಎಂದು ಅವರು ಹೇಳಿದರು.

ಆನ್‌ಲೈನ್ ವ್ಯವಸ್ಥೆ ಇಲ್ಲದಕೆಲ ಕಾಲೇಜುಗಳಲ್ಲಿ ಬುಕ್‌ಲೆಟ್ ಸಹಿತ ಅರ್ಜಿ ವಿತರಿಸಲಾಗುತ್ತಿದೆ. ಇನ್ನು ಕೆಲವು ಪೋಷಕರು ಕಾಲೇಜಿಗೆ ಬಂದು ಅರ್ಜಿ ಪಡೆಯುತ್ತಿದ್ದಾರೆ. ಆನ್‌ಲೈನ್ ವ್ಯವಸ್ಥೆ ಇದ್ದರೂ ಅದರ ಮಾಹಿತಿ ಇಲ್ಲದೆ ಕಾಲೇಜು ಬಳಿಗೆ ಬರುವ ಪೋಷಕರನ್ನು ಸಿಬ್ಬಂದಿ ತಡೆದು ವಾಪಸ್ ಕಳುಹಿಸಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವಂತೆ ತಿಳಿಸುತ್ತಿದ್ದಾರೆ.

ಮಾರ್ಗಸೂಚಿಗೆ ಕಾದಿರುವ ಸರ್ಕಾರಿ ಕಾಲೇಜು
ದಾಖಲಾತಿ ಪ್ರಕ್ರಿಯೆ ನಡೆಸಲು ಸರ್ಕಾರಿ ಕಾಲೇಜುಗಳು ಸರ್ಕಾರದ ಮಾರ್ಗಸೂಚಿಗಾಗಿ ಕಾದಿವೆ.

‘ಕೋವಿಡ್‌ ಕಾರಣದಿಂದ ವಿದ್ಯಾರ್ಥಿ ದಾಖಲಾತಿ ಪ್ರಕ್ರಿಯೆ, ಶುಲ್ಕ ನಿಗದಿಯನ್ನು ಒಳಗೊಂಡ ಮಾರ್ಗಸೂಚಿಯನ್ನು ಸರ್ಕಾರ ಇನ್ನೂ ಹೊರಡಿಸಿಲ್ಲ. ಸರ್ಕಾರ ಕೂಡಲೇ ಮಾರ್ಗಸೂಚಿ ಹೊರಡಿಸಬೇಕು’ ಎಂದು ‌ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.