ADVERTISEMENT

ಒತ್ತೆ ಇಟ್ಟಿದ್ದ ಚಿನ್ನ ಕೇಳಿದ್ದಕ್ಕೆ ಕತ್ತು ಹಿಸುಕಿ ಮಹಿಳೆ ಹತ್ಯೆ!

ಕೊಲೆ ಪ್ರಕರಣ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 6:42 IST
Last Updated 24 ಅಕ್ಟೋಬರ್ 2019, 6:42 IST
   

ಬೆಂಗಳೂರು: ಸಂಜಯ್‌ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.1ರಂದು ನಡೆದ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗೆದ್ದಲಹಳ್ಳಿ ನಿವಾಸಿ ಗೌರಿ (43) ಅವರ ಕೊಲೆ ಪ್ರಕರಣ ಸಂಬಂಧ ದೊಡ್ಡಬಳ್ಳಾಪುರ ನಿವಾಸಿ, ಕೆಎಸ್‍ಆರ್‌ಟಿಸಿಯ ಚಾಲಕ ಕಂ ನಿರ್ವಾಹಕ ಲಕ್ಷ್ಮೀನಾರಾಯಣ (38) ಎಂಬಾತನನ್ನು ಬಂಧಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪದೇ ಪದೇ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದುದರಿಂದ ಲಕ್ಷ್ಮೀನಾರಾಯಣನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಒತ್ತೆ ಇಟ್ಟಿದ್ದ ಚಿನ್ನಾಭರಣ ಬಿಡಿಸಿಕೊಡುವಂತೆ ಹಟ ಮಾಡಿದ ಕಾರಣಕ್ಕೆ ಗೌರಿ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಗೆದ್ದಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಗೌರಿ, ಮನೆ ಕೆಲಸ ಮಾಡಿಕೊಂಡಿದ್ದರು.5–6 ವರ್ಷಗಳಿಂದ ಗೌರಿ ಅವರಿಗೆ ಲಕ್ಷ್ಮೀನಾರಾಯಣನ ಪರಿಚಯವಿತ್ತು. ಆತ ಆಗಾಗ ಗೌರಿ ಮನೆಗೂ ‌ಹೋಗುತ್ತಿದ್ದ. ಈ ಮಧ್ಯೆ ಗೌರಿ ಬಳಿ ಇದ್ದ ಚಿನ್ನಾಭರಣವನ್ನು ಪಡೆದಿದ್ದ ಆತ, ಅದನ್ನು ಗಿರವಿ ಅಂಗಡಿಯಲ್ಲಿ ಒತ್ತೆ ಇಟ್ಟಿದ್ದ. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.

ಅ.1ರಂದು ಚಿನ್ನಾಭರಣ ವಿಷಯದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಹೀಗಾಗಿ, ಮಲಗಿದ್ದ ಗೌರಿ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಆರೋಪಿ ಆಕೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಟ್ಟು ಬೀಗ ಹಾಕಿ ಹೊರಟುಹೋಗಿದ್ದ. ಅ.4ರಂದು ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಮತ್ತು ಸಂಬಂಧಿಕರು ಮನೆಯ ಬೀಗ ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಸಂಜಯ್‍ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.