ಬೆಂಗಳೂರು: ಸೂರ್ಯ ಪಡುವಣದತ್ತ ನಿಧಾನವಾಗಿ ಜಾರುತ್ತಿದ್ದ ಸಮಯದಲ್ಲಿ ಗಾಯನ ಸಮಾಜದಲ್ಲಿ ಸಂಗೀತ ಸುಧೆ ಶುರುವಾಗಿತ್ತು. ಸಂಗೀತ ಕಲಾನಿಧಿ, ವಿದ್ವಾನ್ ಸುಧಾ ರಘುನಾಥನ್ ಅವರ ಗಾನ ಮಾಧುರ್ಯಕ್ಕೆ ನೆರೆದಿದ್ದವರು ತಲೆದೂಗಿದರು.
ನಗರದ ಶ್ರೀ ರಾಮಸೇವಾ ಮಂಡಲಿ ಟ್ರಸ್ಟ್ ಹಮ್ಮಿಕೊಂಡಿರುವ 27ನೇ ವರ್ಷದ ಎಸ್.ವಿ.ನಾರಾಯಣಸ್ವಾಮಿ ರಾವ್ ಸ್ಮಾರಕ ಅಂತರರಾಷ್ಟ್ರೀಯ ಸಂಗೀತ ಉತ್ಸವಕ್ಕೆ ಶುಕ್ರವಾರ ಚಾಲನೆ ಲಭಿಸಿತು.
ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಉತ್ಸವ ಉದ್ಘಾಟಿಸಿದ ಬಳಿಕ ಸಭಾಂಗಣವು ಸ್ವರ ಮಾಧುರ್ಯಕ್ಕೆ ಸಾಕ್ಷಿಯಾಯಿತು.
ವಿದುಷಿ ಚಾರುಮತಿ ರಾಮಾನುಜಂ ಅವರ ವಯಲಿನ್,ವಿದ್ವಾನ್ ಅಕ್ಷಯ್ ಅನಂತ ಪದ್ಮನಾಭನ್ ಅವರ ಮೃದಂಗ ವಾದನವೂ ಕಿವಿಗೆ ಇಂಪು ನೀಡಿದವು.
ವಿದ್ವಾನ್ ವಾಲಯಪಟ್ಟಿ ಎ.ಆರ್.ಸುಬ್ರಮಣಿಯಂ ಹಾಗೂ ಸಂಗಡಿಗರ ಸಂಗೀತ ಕಛೇರಿಸಂಜೆ 4 ರಿಂದ 6ರವರೆಗೆ ನಿಗದಿಯಾಗಿತ್ತು. ಅನಿವಾರ್ಯ ಕಾರಣಗಳಿಂದ ಅದು ರದ್ದಾಯಿತು. ಈ ಕೊರಗನ್ನು ಸುಧಾ ದೂರ ಮಾಡಿದರು.
ಸುಮಾರು ಎರಡೂವರೆ ಗಂಟೆ ಸಂಗೀತ ಕಛೇರಿ ನಡೆಸಿಕೊಟ್ಟ ಅವರು ತಮ್ಮ ಸವಿಗಾನದಿಂದ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು. ಆನ್ಲೈನ್ ಮೂಲಕವೂ ಹಲವರು ಅವರ ಹಾಡುಗಳನ್ನು ಆಲಿಸಿದರು.
ಶನಿವಾರ ಬೆಳಿಗ್ಗೆ 9.30ಕ್ಕೆ ಸಂಗೀತ ಕಚೇರಿ ಶುರುವಾಗಲಿವೆ. ಪ್ರಸಿದ್ಧ ಹಿಂದೂಸ್ಥಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು, ವೀಣೆ, ಡೋಲು, ಪಿಟೀಲು, ಸ್ಯಾಕ್ಸೊಫೋನ್, ವಯಲಿನ್ ಹಾಗೂ ಕೊಳಲು ವಾದಕರು ಸಂಗೀತ ಕಛೇರಿಗಳನ್ನು ನಡೆಸಿಕೊಡಲಿದ್ದಾರೆ. ಆನ್ಲೈನ್ನಲ್ಲೂ (https://shaale.com/watch/svn) ನೇರ ಪ್ರಸಾರ ಇರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.