ಬೆಂಗಳೂರು: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಎಚ್.ಎನ್. ನಾಗಮೋಹನದಾಸ್ ಅವರು ನೀಡಿರುವ ವರದಿಯಲ್ಲಿ ಬಳಸಿರುವ ಸ್ಪೃಶ್ಯ- ಅಸ್ಪೃಶ್ಯ ಪದಗಳನ್ನು ತಕ್ಷಣ ಕೈ ಬಿಡಬೇಕು ಎಂದು ಬಂಜಾರ ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ನೇತೃತ್ವದಲ್ಲಿ ಬಂಜಾರರ ವಿವಿಧ ಸಂಘ ಸಂಸ್ಥೆಗಳು ಹಾಗೂ ಸರ್ವ ಪಕ್ಷಗಳ ಮುಖಂಡರ ಸಭೆ ನಡೆಸಲಾಯಿತು. ‘13 ಇಲಾಖೆಗಳು ಆಯೋಗಕ್ಕೆ ಅಂಕಿಅಂಶವನ್ನೇ ನೀಡದೇ ಇರುವುದರಿಂದ ವರದಿ ಅವೈಜ್ಞಾನಿಕ’ ಎಂದು ಸಭೆಯಲ್ಲಿ ತಿಳಿಸಲಾಯಿತು.
ಬಂಜಾರ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳಿಗೆ ಜನಸಂಖ್ಯೆವಾರು ಹೆಚ್ಚು ಮೀಸಲು ನಿಗದಿ ಪಡಿಸಬೇಕು. ಈ ಪಟ್ಟಿಯಲ್ಲಿರುವ ಬಲಿಷ್ಠ ಸಮುದಾಯವಾದ ಬೇಡಜಂಗಮರನ್ನು ಕೈಬಿಡಬೇಕು. ಶಿಕ್ಷಣ, ಆರ್ಥಿಕ ಪ್ರಗತಿ, ಉದ್ಯೋಗಕ್ಕೆ ಸಂಬಂಧಿಸಿ ಪ್ರಸಕ್ತ ಸಾಲಿನ ಅಂಕಿ ಅಂಶ ಮಾತ್ರ ತೆಗೆದುಕೊಂಡಿರುವುದು ಅವೈಜ್ಞಾನಿಕ. ಇದನ್ನು ಕೈಬಿಟ್ಟು, 50 ವರ್ಷದ ಅಂಕಿ ಅಂಶವನ್ನು ಪರಿಗಣಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಜನಗಣತಿಯ ನಂತರ ಈ ಎಲ್ಲ ಅಂಶಗಳನ್ನು ಸರಿಪಡಿಸಿ, ಮತ್ತೊಮ್ಮೆ ಪರಾಮರ್ಶಿಸಿ ಒಳಮೀಸಲು ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಸಂಘದ ಅಧ್ಯಕ್ಷ ಎನ್.ಆರ್. ನಾಯಕ್, ಪ್ರಧಾನ ಕಾರ್ಯದರ್ಶಿ ಎಚ್.ಬಿ. ಸಿದ್ಯಾನಾಯಕ್, ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಮಾಜಿ ಸಂಸದ ಉಮೇಶ್ ಜಾಧವ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ, ತಾಂಡಾ ನಿಗಮದ ಅಧ್ಯಕ್ಷ ಜಯದೇವನಾಯ್ಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.