ಬೆಂಗಳೂರು: ‘ಸಮಾಜದ ಆಗು–ಹೋಗುಗಳಿಗೆ ಡಿ.ಆರ್. ನಾಗರಾಜ ತಕ್ಷಣಕ್ಕೆ ಸ್ಪಂದಿಸುತ್ತಿದ್ದರು, ಪ್ರತಿಕ್ರಿಯಿಸುತ್ತಿದ್ದರು. ಪಿ.ಲಂಕೇಶ್ ಮತ್ತು ಅವರು ಬಂಡಾಯ ಸಾಹಿತ್ಯದಲ್ಲಿ ಎಚ್ಚರದ ಕಣ್ಣುಗಳಿಂತಿದ್ದರು’ ಎಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಡಿ.ಆರ್. ನಾಗರಾಜ–67’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು,‘ಲಂಕೇಶ್ ಮತ್ತು ನಾಗರಾಜ ಅವರ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾತ್ವಿಕವಾದ ಭಯವಿತ್ತು. ಕೃತಿಗಳನ್ನು ಪ್ರಕಟಿಸಿದ ನಂತರ ಈ ಇಬ್ಬರ ವಿಮರ್ಶೆ ಹೇಗಿರು
ತ್ತದೆ ಎಂದು ಲೇಖಕರು ಕುತೂಹಲದಿಂದ ಕಾಯುತ್ತಿದ್ದರು. ಅವರಿಬ್ಬರ ಅನುಪಸ್ಥಿತಿಯಿಂದಾಗಿ ಸಾಹಿತ್ಯ ಕ್ಷೇತ್ರದಲ್ಲಿ ನಿರ್ವಾತ ಸೃಷ್ಟಿಯಾದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಸಾಹಿತ್ಯ ವಿಮರ್ಶೆಗೆ ಸೃಜನಶೀಲ ರೂಪ ಕೊಟ್ಟವರು ನಾಗರಾಜ. ಅವರ ವಿಮರ್ಶೆ ಲೇಖಕರ ದೃಷ್ಟಿಕೋನವನ್ನು ವಿಸ್ತರಿಸುವಂತಿರುತ್ತಿದ್ದವು’ ಎಂದರು.
‘ಆರ್.ಸಿ. ಹಿರೇಮಠ ಅವರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದರು. ಆಗ, ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿ, ಅದನ್ನು ವಿರೋಧಿಸಿದವರ ಪೈಕಿ ಡಿ.ಆರ್. ನಾಗರಾಜ ಪ್ರಮುಖರು. ಇದಕ್ಕೆ ಪರ್ಯಾಯವಾಗಿ ಅವರು ಮತ್ತೊಂದು ಸಮ್ಮೇಳನವನ್ನು ಸಂಘಟಿಸಿದರು’ ಎಂದು ನೆನಪಿಸಿಕೊಂಡರು.
‘ನಾಗರಾಜ ಅವರಂತಹ ಸಾಹಿತ್ಯ ಮೌಲ್ಯಮಾಪಕರು ಈಗ ಇಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಯಾರಿಗೇ ಪ್ರಶಸ್ತಿ ಕೊಟ್ಟರೂ, ಯಾರಿಗೆ ಯಾವ ಸ್ಥಾನ ನೀಡಿದರೂ ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ’ ಎಂದರು.
ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಕೋಡದ ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ರುದ್ರೇಶ್ ಅದರಂಗಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.