ADVERTISEMENT

ಬೆಂಗಳೂರು: ಬೆಟ್ಟಹಲಸೂರು ಕ್ರಾಸ್, ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 14:18 IST
Last Updated 6 ಜುಲೈ 2025, 14:18 IST
<div class="paragraphs"><p>ನಾಗವಾರದಲ್ಲಿ ನಮ್ಮ ಮೆಟ್ರೊ ನೀಲಿ ಮತ್ತು ಗುಲಾಬಿ ಮಾರ್ಗಗಳು ಸೇರುವ ಜಂಕ್ಷನ್‌ನಲ್ಲಿ&nbsp;ಮೆಟ್ರೊ ನಿಲ್ದಾಣ ಕಾಮಗಾರಿ ನಡೆಯುತ್ತಿದೆ </p></div>

ನಾಗವಾರದಲ್ಲಿ ನಮ್ಮ ಮೆಟ್ರೊ ನೀಲಿ ಮತ್ತು ಗುಲಾಬಿ ಮಾರ್ಗಗಳು ಸೇರುವ ಜಂಕ್ಷನ್‌ನಲ್ಲಿ ಮೆಟ್ರೊ ನಿಲ್ದಾಣ ಕಾಮಗಾರಿ ನಡೆಯುತ್ತಿದೆ

   

ಪ್ರಜಾವಾಣಿ ಚಿತ್ರ: ರಂಜು ಪಿ.

ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾದು ಹೋಗುವ ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಬೆಟ್ಟಹಲಸೂರು ಕ್ರಾಸ್, ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ಮೆಟ್ರೊ ನಿಲ್ದಾಣ ನಿರ್ಮಾಣಕ್ಕಾಗಿ ಹೋರಾಟ ನಡೆಸುವ ಕುರಿತು ಹುಣಸಮಾರನಹಳ್ಳಿ ಗ್ರಾಮದ ಬಳಿ ಸುತ್ತಮುತ್ತಲ ಗ್ರಾಮಸ್ಥರು ಪೂರ್ವಭಾವಿ ಸಭೆ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿ, ‘ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ಸುತ್ತಮುತ್ತ 40 ಗ್ರಾಮಗಳಿವೆ. ಒಂದೂವರೆ ಲಕ್ಷ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಈ ಭಾಗದಲ್ಲಿ ಮೆಟ್ರೊ ನಿಲ್ದಾಣ ಸ್ಥಾಪನೆ ಅತ್ಯವಶ್ಯಕ’ ಎಂದು ಹೇಳಿದರು.

‘ಬೆಟ್ಟಹಲಸೂರು ಕ್ರಾಸ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ಬಿಎಂಆರ್‌ಸಿಎಲ್‌ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದಕ್ಕಾಗಿ ರೈತರ ಜಮೀನನ್ನೂ ಸ್ವಾಧೀನಪಡಿಸಿ ಕೊಂಡಿತ್ತು. ಈಗ ದಿಢೀರ್‌ ಆಗಿ ಮೆಟ್ರೊ ನಿಲ್ದಾಣ ನಿರ್ಮಾಣವನ್ನು ಕೈಬಿಟ್ಟಿದೆ. ಇದರ ಹಿಂದೆ ಯಾವ ಹಿತಾಸಕ್ತಿಗಳು, ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ಬಹಿರಂಗವಾಗಬೇಕು’ ಎಂದು ಆಗ್ರಹಿಸಿದರು.

ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಕುರಿತು ಕೆಲವು ರೈತ ಮುಖಂಡರು ಸಲ್ಲಿಸಿದ ಮನವಿ ಪತ್ರಕ್ಕೆ ಸಹಿ ಹಾಕಿದ್ದು ಬಿಟ್ಟರೆ ಬೇರೆ ಯಾವ ಕೆಲಸಗಳಾಗಿಲ್ಲ. ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೊ ನಿಲ್ದಾಣ ಒದಗಿಸದೇ ಇದ್ದರೆ ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 11ರಿಂದ ಪತ್ರ ಚಳವಳಿ ಆರಂಭಿಸಲಾಗುವುದು. ಪತ್ರಗಳನ್ನು ಮುಖ್ಯಮಂತ್ರಿಗೆ ಕಳುಹಿಸಲಾಗುವುದು. ಒಂದು ವಾರದ ಒಳಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಜುಲೈ 18ರಿಂದು ರಾಷ್ಟ್ರೀಯ ಹೆದ್ದಾರಿ ತಡೆ, ಸಚಿವರ ಮನೆಗೆ ಮುತ್ತಿಗೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದೊಡ್ಡಜಾಲ ಹನುಮಂತುಗೌಡ, ಕ.ರ.ವೇ. ರಾಜ್ಯ ಕಾರ್ಯದರ್ಶಿ ಸಾತನೂರು ಸುರೇಶ್ ಗೌಡ, ದಲಿತ ರೈತ ಸಂಘದ ರಾಜ್ಯಾಧ್ಯಕ್ಷ ಎಸ್.ಪಿ. ಮುನಿಯಪ್ಪ, ಮರಳುಕುಂಟೆ ನಾರಾಯಣಸ್ವಾಮಿ, ಹುಣಸಮಾರನಹಳ್ಳಿ ರಾಮು, ಹಸಿರೇ ಉಸಿರು ಸಂಘಟನೆಯ ಸಂಸ್ಥಾಪಕ‌ ಅಧ್ಯಕ್ಷ ಬೆಟ್ಟಹಲಸೂರು ಶ್ರೀನಿವಾಸಮೂರ್ತಿ, ಆಚಾರ್ಯ ಬಡಾವಣೆ ನಿವಾಸಿಗಳ ಸಂಘದ ಶರಣ ಪ್ರಕಾಶ್, ಎಂ.ವಿ‌. ಸೋಲರೈಸರ್‌ನ ದರ್ಶನ್, ಬೆಟ್ಟಹಲಸೂರು ಪ್ರಶಾಂತ್, ಪಿ.ಜಿ. ಓನರ್ಸ್‌ ಅಸೋಸಿಯೇಷನ್‌ನ ಮಹೇಶ್, ವಿದ್ಯಾಸಾಗರ್ ವೆಲ್ಫೇರ್ ಅಸೋಸಿಯೇಷನ್‌ನ ಕಿರಣ್, ಎಸ್.ಎಂ.ಆರ್. ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಕಿರಣ್, ಮಹಾವೀರ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಪ್ರಸನ್ನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.