ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ನಡೆಯುತ್ತಿ
ರುವ ‘ರಾಷ್ಟ್ರೀಯ ತೋಟಗಾರಿಕಾ ಮೇಳ-2023’ಕ್ಕೆ ಶುಕ್ರವಾರ 12 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.
ವಿವಿಧ ಜಾತಿಗಳ ಹೂವು, ಹಣ್ಣು, ತರಕಾರಿಗಳ ಪ್ರದರ್ಶನವಿದೆ. ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹೂವಿನ ಗಿಡ, ಆಲಂಕಾರಿಕ ಪುಷ್ಪಗಳು, ಔಷಧೀಯ ಗಿಡಗಳು, ಸೌಗಂಧಿಕ ಬೆಳೆಗಳು, ಅಣಬೆ ಬೆಳೆಗಳ ಉತ್ಪಾದನೆ ಮತ್ತು ಮೌಲ್ಯವರ್ಧಿತ ತಂತ್ರಜ್ಞಾನಗಳ ನೋಟ ಮೇಳಕ್ಕೆ ಮೆರುಗು ನೀಡುತ್ತಿವೆ. ಈ ಕುರಿತು ಆಸಕ್ತ ರೈತರು ಮತ್ತು ಯುವಕರು ಐಐಎಚ್ಆರ್ನ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.
ಶುಕ್ರವಾರ ನಡೆದ ತೋಟಗಾರಿಕಾ ತಂತ್ರಜ್ಞಾನದ ಕಾರ್ಯಾಗಾರದಲ್ಲಿ 40ಕ್ಕೂ ಹೆಚ್ಚು ಉತ್ಸಾಹಿ ಯುವಕರು ಪಾಲ್ಗೊಂಡಿದ್ದರು. ನೆರೆಯ ರಾಜ್ಯಗಳಾದ ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡು, ಪುದುಚೇರಿಯಿಂದ ಕೃಷಿಕರು, ತೋಟಗಾರಿಕಾ ಉತ್ಪನ್ನಗಳ ಉದ್ದಿಮೆದಾರರು ಮೇಳಕ್ಕೆ ಭೇಟಿ ನೀಡಿದ್ದಾರೆ. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಸಕ್ತರು ಬಂದಿದ್ದಾರೆ’ ಎಂದು ಆಯೋಜಕರು ತಿಳಿಸಿದರು.
‘ಐಐಎಚ್ಆರ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಚಿತ್ರದುರ್ಗದ ಯುವ ರೈತ ಮನೋಜ್ ಬಿ., ಒಡಿಶಾದ ಸುರೇಶ್ ಚಂದ್ರ ಓಟ, ಚಿಕ್ಕಬಳ್ಳಾಪುರದ ಅಶ್ವತಪ್ಪ, ಚಾಮರಾಜನಗರದ ಮಹೇಶ್ ನಾಯಕ್, ಬೆಂಗಳೂರಿನ ಯುವ ಉದ್ಯಮಿ ಸತೀಶ, ಬಿಜಾಪುರದ ಆರ್.ಎಸ್. ಪಾಟೀಲ್, ತುಮಕೂರಿನ ವೆಂಕಟರಾಯಪ್ಪ ಅವರನ್ನು ಸನ್ಮಾನಿಸಲಾಯಿತು’ ಎಂದು ಐಐಎಚ್ಆರ್ನ ನಿರ್ದೇಶಕ ಎಸ್. ಕೆ. ಸಿಂಗ್ ಮಾಹಿತಿ ನೀಡಿದರು.
ಬೆಂಗಳೂರಿನ ಅಟಾರಿಯ ಪ್ರಧಾನ ವಿಜ್ಞಾನಿಗಳಾದ ಡಾ. ಡಿ.ವಿ.ಎಸ್ ರೆಡ್ಡಿ, ಡಾ. ಸಿ. ಕೆ. ನಾರಾಯಣ ಡಾ. ಪ್ರಕಾಶ್ ಪಾಟೀಲ್, ಡಾ. ಸಿ ಅಶ್ವಥ್, ವೆಂಕಟ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.