ADVERTISEMENT

ನವೋದಯ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ನಾಳೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 20:20 IST
Last Updated 14 ಜುಲೈ 2023, 20:20 IST
   

ಬೆಂಗಳೂರು: ನವೋದಯ ವಿದ್ಯಾಲಯ ಸಮಿತಿಯ ಹೈದರಾಬಾದ್‌ ವಲಯದ ವತಿಯಿಂದ ‘ಪ್ರಾದೇಶಿಕ ಮಟ್ಟದ ಹಳೆ ವಿದ್ಯಾರ್ಥಿಗಳ ಸಮಾವೇಶ’ವನ್ನು ಯಲಹಂಕ ಸಮೀಪದ ಬಾಗಲೂರು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ಜುಲೈ 16ರಂದು ಆಯೋಜಿಸಲಾಗಿದೆ.

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಲಕ್ಷದ್ವೀಪ, ಪುದುಚೇರಿ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಂದ 77ಕ್ಕೂ ಹೆಚ್ಚು ಜವಾಹರ ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಸಮಾವೇಶ ಆರಂಭವಾಗಲಿದ್ದು, ಆರು ಸಾವಿಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದ್ದು, ಶಿಕ್ಷಣ, ಉದ್ಯಮ, ವೈದ್ಯಕೀಯ, ದಂತವೈದ್ಯಕೀಯ, ರಿಯಲ್‌ ಎಸ್ಟೇಟ್‌ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ.

ADVERTISEMENT

ಬೆಂಗಳೂರು ನಗರ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯವು ಈ ಸಮಾವೇಶ ಆಯೋಜಿಸುವ ಹೊಣೆ ವಹಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ವಸತಿ ಶಾಲೆ ಎನ್ನುವ ಕೀರ್ತಿಗೆ ಈ ವಿದ್ಯಾಲಯ ಪಾತ್ರವಾಗಿದೆ ಎಂದು ಪ್ರಾಂಶುಪಾಲ ಎಸ್‌. ಕಣ್ಣನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ನವೋದಯ ವಿದ್ಯಾಲಯ ಸಮಿತಿಯ ಆಯುಕ್ತ ವಿನಾಯಕ ಗರ್ಗ್‌, ಹೈದರಾಬಾದ್‌ ವಲಯದ ನವೋದಯ ವಿದ್ಯಾಲಯ ಸಮಿತಿಯ ಡೆಪ್ಯೂಟಿ ಕಮಿಷನರ್‌ ಟಿ. ಗೋಪಾಲಕೃಷ್ಣ, ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಮತ್ತು ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರೀತಿ ಜೆ. ಮುನೇಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.