ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದಕ ವಸ್ತು ನಿಗ್ರಹ ಘಟಕ (ಎನ್ಸಿಬಿ) ಅಧಿಕಾರಿಗಳು ಸುಮಾರು ₹50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಾರ್ಯಾಚರಣೆ ನಡೆಸಿರುವ ಮಾದಕ ವಸ್ತು ನಿಗ್ರಹ ಘಟಕ (ಎನ್ಸಿಬಿ) ಅಧಿಕಾರಿಗಳು ಸುಮಾರು ₹50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಥಾಯ್ಲೆಂಡ್ನಿಂದ ಬೆಂಗಳೂರಿಗೆ ಹೈಡ್ರೋಪೊನಿಕ್ ಗಾಂಜಾ ಕಳ್ಳ ಸಾಗಣೆ ಆಗುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಬಂದಿತ್ತು. ಈ ಸುಳಿವಿನ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದಾಗ ಕೊಲಂಬೊದಿಂದ ಮೂವರು ವಿಮಾನದಲ್ಲಿ ಅಕ್ಟೋಬರ್ 9 ರಂದು ಬೆಂಗಳೂರಿಗೆ ಹೈಡ್ರೋ ಗಾಂಜಾ ಹಾಗೂ ಸೈಲೋಸಿಬಿನ್ ಅಣಬೆ ತೆಗೆದುಕೊಂಡು ಬರುತ್ತಿರುವುದು ಗೊತ್ತಾಗಿತ್ತು. ಆ ಮೂವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದಾಗ ಹೈಡ್ರೋ ಗಾಂಜಾ ಹಾಗೂ ಸೈಲೋಸಿಬಿನ್ ಅಣಬೆ ಪತ್ತೆಯಾಯಿತು ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಲ್ಲಿ ಒಬ್ಬಾತ ಶ್ರೀಲಂಕಾ ಪ್ರಜೆ. ಆರೋಪಿಗಳಿಂದ 45 ಕೆ.ಜಿ. ಹೈಡ್ರೋ ಗಾಂಜಾ ಮತ್ತು 6 ಕೆ.ಜಿ. ಸೈಲೋಸಿಬಿನ್ ಅಣಬೆ ವಶಪಡಿಸಿಕೊಳ್ಳಲಾಗಿದೆ. ಈ ಮಾದಕ ವಸ್ತುಗಳ ಮೌಲ್ಯ ಸುಮಾರು ₹50 ಕೋಟಿ ಎಂದು ಅಂದಾಜಿಸಲಾಗಿದೆ.
ಹೈಡ್ರೋ ಗಾಂಜಾ ಮತ್ತು ಸೈಲೋಸಿಬಿನ್ ಅಣಬೆಗಳನ್ನು ಫುಡ್ ಟಿನ್ಗಳಲ್ಲಿ ತುಂಬಿಸಿ ಸೀಲ್ ಮಾಡಲಾಗಿತ್ತು. ಮಾದಕ ವಸ್ತುಗಳ ಕಳ್ಳಸಾಗಣೆಯ ಸೂತ್ರಧಾರಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.