ಬೆಂಗಳೂರು: ದುಪ್ಪಟ್ಟು ಲಾಭದ ಆಮಿಷವೊಡ್ಡಿ ಆನ್ಲೈನ್ ಮೂಲಕ ನಗರದ ನಿವಾಸಿಗಳಿಬ್ಬರಿಂದ ₹ 8.69 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ನಗರದ ಪೂರ್ವ ವಿಭಾಗ ಹಾಗೂ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
‘ಎಚ್ಬಿಆರ್ ಲೇಔಟ್ನ 35 ವರ್ಷದ ಮಹಿಳೆ, ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಇತ್ತೀಚೆಗೆ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ಆನ್ಲೈನ್ ಮೂಲಕಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡಲಾಗುವುದು’ ಎಂದಿದ್ದರು. ಅದನ್ನು ನಂಬಿದ್ದ ಮಹಿಳೆ, ಆರೋಪಿ ಗಳು ಹೇಳಿದ್ದ ಖಾತೆಗಳಿಗೆ ಹಂತ ಹಂತವಾಗಿ ₹ 3.69 ಲಕ್ಷ ಜಮೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹಣ ಪಡೆದು ವರ್ಷವಾದರೂ ಆರೋಪಿಗಳು ಯಾವುದೇ ಲಾಭಾಂಶ ನೀಡಿಲ್ಲ. ಹೂಡಿಕೆ ಹಣವನ್ನೂ ವಾಪಸು ಕೊಟ್ಟಿಲ್ಲ. ನೊಂದ ಮಹಿಳೆ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.
ಯೂಟ್ಯೂಬ್ ಜಾಹೀರಾತು ನಂಬಿ ಹೂಡಿಕೆ: ‘ಎಲೆಕ್ಟ್ರಾನಿಕ್ ಸಿಟಿ ಬಳಿಯಮಂಜುನಾಥ ನಗರದ 33 ವರ್ಷದನಿವಾಸಿ, ಹಣ ಹೂಡಿಕೆ ಬಗ್ಗೆ ಯೂಟ್ಯೂಬ್ ವಿಡಿಯೊದಲ್ಲಿ ಜಾಹೀರಾತು ನೋಡಿದ್ದರು. ಜಾಹೀರಾತು ನೀಡಿದ್ದ ಆರೋಪಿ ಸಚಿನ್ ಕಪೂರ್ ಎಂಬಾತನಿಗೆ ಕರೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಎಚ್ಆರ್ ಟೆಕ್ನೊಲಾಜೀಸ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರುವುದಾಗಿ ಆರೋಪಿ ಹೇಳಿದ್ದ. ಆತನ ಮಾತು ನಂಬಿದ್ದ ದೂರುದಾರ, ಆತ ಹೇಳಿದ್ದ ಖಾತೆಗಳಿಗೆ ಹಂತ ಹಂತವಾಗಿ ₹ 5 ಲಕ್ಷ ಹಾಕಿದ್ದರು. ಅದಾದ ನಂತರ ಕಂಪನಿಯಿಂದ ಯಾವುದೇ ಲಾಭಾಂಶ ಬಂದಿಲ್ಲ. ಈ ಸಂಗತಿ ದೂರಿನಲ್ಲಿದೆ. ಸಚಿನ್ ಕಪೂರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.