ಬೆಂಗಳೂರು: ಮಹಾರಾಷ್ಟ್ರದಿಂದ ಬೆಂಗಳೂರಿಗೆ ರೈಲಿನಲ್ಲಿ 504 ಪ್ರಯಾಣಿಕರು ಗುರುವಾರ ಬೆಳಿಗ್ಗೆ ಬಂದಿಳಿದಿದ್ದಾರೆ. ಅವರಲ್ಲಿ ಕೆಲವರು ಕ್ವಾರಂಟೈನ್ಗೆ ಹೋಗಲು ವಿರೋಧ ವ್ಯಕ್ತಪಡಿಸಿ ಗೊಂದಲದ ವಾತಾವರಣ ಸೃಷ್ಟಿಸಿದರು.
ಉದ್ಯಾನ್ ಎಕ್ಸ್ಪ್ರೆಸ್ನಲ್ಲಿ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಕಳುಹಿಸಲು ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿ ಸಜ್ಜಾಗಿದ್ದರು. ಬಿಎಂಟಿಸಿ ಬಸ್ಗಳೂ ಸಿದ್ಧವಾಗಿದ್ದವು. ಬಸ್ ಹತ್ತಲು ಕೆಲವರು ವಿರೋಧ ವ್ಯಕ್ತಪಡಿಸಿ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರುವುದಾಗಿ ಹೇಳಿದರು. ಆದರೆ, ಅದಕ್ಕೆ ಒಪ್ಪದ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ, ಎಲ್ಲರೂ ಕ್ವಾರಂಟೈನ್ಗೆ ಹೋಗಲೇಬೇಕು ಎಂದು ಮನವರಿಕೆ ಮಾಡಿದರು. ಒಪ್ಪದೆ ಬ್ಯಾಗ್ ಹಿಡಿದು ಹೊರಟವರನ್ನು ಪೊಲೀಸರು ಬಲವಂತವಾಗಿ ಬಸ್ ಹತ್ತಿಸಿದರು.
ಕೆಲವರು ಹೋಟೆಲ್ ಕ್ವಾರಂಟೈನ್ಗೆ ಹೋದರೆ, ಮತ್ತೆ ಕೆಲವರು ಸರ್ಕಾರ ವ್ಯವಸ್ಥೆ ಮಾಡಿರುವ ಕೇಂದ್ರಗಳಿಗೆ ಹೋದರು. ಇನ್ನೂ ಕೆಲವರನ್ನು ಕೈಗೆ ಸೀಲ್ ಹೊಡೆದು ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಯಿತು.
‘ಬಸ್ ಹತ್ತುವ ಮುನ್ನ ₹200 ನೀಡುವಂತೆ ಬಿಬಿಎಂಪಿ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಾವು ತಿನ್ನಲು ಅನ್ನವಿಲ್ಲದ ಸ್ಥಿತಿಯಲ್ಲಿದ್ದೆವು. ಹಣ ಕೇಳಿದರೆ ಎಲ್ಲಿಂದ ತರಬೇಕು? ಬಸ್ನಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲು ₹200 ಏಕೆ ಬೇಕು’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಯಾಣದರ ₹100 ಮಾತ್ರ ಪಡೆಯಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.