ಭರತ್ ಭೂಷಣ್
ಬೆಂಗಳೂರು: ಅಳಿಯ ಭರತ್ ಭೂಷಣ್, ಮಗಳು ಸುಜಾತಾ, ಮೂರು ವರ್ಷದ ಮೊಮ್ಮಗ ಸೇರಿ ಐವರು ಏಪ್ರಿಲ್ 18ರಂದು (ಶುಕ್ರವಾರ) ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದರು. ನಾಲ್ವರು ವಾಪಸ್ ಬರ್ತಾ ಇದ್ದಾರೆ. ಅಳಿಯ ಬಾಕ್ಸ್ನಲ್ಲಿ ಬರ್ತಾರೆ...
ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮತ್ತೀಕೆರೆಯ ಗೋಕುಲ ಬಡಾವಣೆಯ ನಿವಾಸಿ ಭರತ್ ಭೂಷಣ್ ಅವರ ಅತ್ತೆ ವಿಮಲಾ ಅವರು ಹೀಗೆ ಹೇಳುತ್ತಲೇ ಕಣ್ಣೀರಾದರು.
‘ಮಗಳು ವೈದ್ಯೆ. ಮಂಗಳವಾರ ಮಧ್ಯಾಹ್ನ 2.45ರ ಸುಮಾರಿಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದಳು’ ಎಂದು ದುಃಖಿತರಾದರು.
‘ಸಾಫ್ಟ್ವೇರ್ ಉದ್ಯೋಗಿ ಆಗಿದ್ದ ಭರತ್ ಭೂಷಣ್ ಅವರು ಭದ್ರಪ್ಪ ಲೇಔಟ್ನಲ್ಲಿ ಡಯಾಗ್ನೋಸ್ಟಿಕ್ ಕೇಂದ್ರವನ್ನೂ ನಡೆಸುತ್ತಿದ್ದರು. ಐದು ವರ್ಷದ ಹಿಂದೆ ಮದುವೆ ಆಗಿತ್ತು. ಕಾಶ್ಮೀರಕ್ಕೆ ಹೋಗಬೇಕೆಂದು ಮಗಳು ಹಾಗೂ ಅಳಿಯ ಬಹಳ ದಿನಗಳಿಂದ ಯೋಚಿಸಿದ್ದರು. ಕಳೆದ ವರ್ಷ ನಾವು ಹೋಗಿದ್ದವು. ಈ ವರ್ಷ ಅವರು ತೆರಳಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಅಷ್ಟರಲ್ಲಿ ಉಗ್ರರು ನನ್ನ ಅಳಿಯನನ್ನು ಬಲಿ ಪಡೆದಿದ್ದಾರೆ’ ಎಂದು ವಿಮಲಾ ಹೇಳಿದರು.
‘ಮೊಮ್ಮಗ ಅಳಿಯನ ಭುಜದ ಮೇಲೆ ಕುಳಿತುಕೊಂಡಿದ್ದ. ಮೊಮ್ಮಗನನ್ನು ಕೆಳಕ್ಕೆ ಇಳಿಸಿದ ಭಯೋತ್ಪಾದಕರು ಹೆಸರು ಕೇಳಿದ್ದಾರೆ. ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ದಾರೆ. ನಂತರ, ಭರತ್ ಕುಸಿದು ಬೀಳುವವರೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರನ್ನು ಸಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಉಗ್ರರು ಅಲ್ಲಿಂದ ಪರಾರಿಯಾದ ಮೇಲೆ ಮಗಳು ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದಳು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.