ADVERTISEMENT

ಪೀಣ್ಯ ದಾಸರಹಳ್ಳಿ: ಪತಿ ಕೊಂದು ಮೃತದೇಹ ಸುಟ್ಟಿದ್ದ ಪತ್ನಿ

ಪತ್ನಿ, ಪ್ರಿಯಕರ, ಸ್ನೇಹಿತನ ಬಂಧನ. ಮಾದನಾಯಕನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 14:47 IST
Last Updated 28 ನವೆಂಬರ್ 2025, 14:47 IST
ಕೊಲೆಯಾದ ಬಸವರಾಜು 
ಕೊಲೆಯಾದ ಬಸವರಾಜು    

ಪೀಣ್ಯ ದಾಸರಹಳ್ಳಿ: ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿದ್ದ ಪತ್ನಿ, ಆಕೆಯ ಪ್ರಿಯಕರ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ್ದ ಪ್ರಿಯಕರನ ಸ್ನೇಹಿತನನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿಯ ಬಸವರಾಜು (28) ಕೊಲೆಯಾದವರು. 

ಪ್ರಕರಣದ ಸಂಬಂಧ ಬಸವರಾಜು ಅವರ ಪತ್ನಿ ಶರಣಮ್ಮ(25), ಪ್ರಿಯಕರ ವೀರಭದ್ರ (19) ಮತ್ತು ಅನಿಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದು ಗೊತ್ತಾಗಿದೆ.

ADVERTISEMENT

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಕೊಲೆಯ ರಹಸ್ಯ ಭೇದಿಸಿದ್ದಾರೆ.

ವೀರಭದ್ರನ ಜತೆಗೆ ಶರಣಮ್ಮ ಸಲುಗೆಯಿಂದ ಇದ್ದಳು. ತಮ್ಮ ಸಂಬಂಧಕ್ಕೆ ಪತಿ ಅಡ್ಡಿ ಆಗುತ್ತಾರೆ ಎನ್ನುವ ಕಾರಣಕ್ಕೆ ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿದ್ದ ಬಸವರಾಜು– ಶರಣಮ್ಮ ದಂಪತಿ, ತಿಗಳರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವೀರಭದ್ರ ಗಾರೆ ಕೆಲಸ ಮಾಡಿಕೊಂಡಿದ್ದ. ಈ ವೇಳೆ ವೀರಭದ್ರ ಮತ್ತು ಶರಣಮ್ಮ ನಡುವೆ ಸಲುಗೆ ಬೆಳೆದಿತ್ತು ಎಂದು ಮೂಲಗಳು ಹೇಳಿವೆ.

ನ.19ರಂದು ಮದ್ಯ ಸೇವಿಸಿ ಬಸವರಾಜು ಮಲಗಿದ್ದಾಗ ಪ್ರಿಯಕರನನ್ನು ಶರಣಮ್ಮ ಮನೆಗೆ ಕರೆಸಿಕೊಂಡಿದ್ದಳು. ವೀರಭದ್ರನ ಜತೆಗೆ ತನ್ನ ಸ್ನೇಹಿತ ಅನಿಲ್ ಸಹ ಬಂದಿದ್ದ. ಮೂವರು ಸೇರಿಕೊಂಡು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಬಳಿಕ, ಮೃತದೇಹವನ್ನು ಗಂಗೊಂಡಹಳ್ಳಿ ನಿರ್ಜನ ಪ್ರದೇಶಕ್ಕೆ ಆರೋಪಿಗಳು ಸಾಗಿಸಿದ್ದರು. ಅಲ್ಲಿ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದರು ಎಂದು ಪೊಲೀಸರು ಹೇಳಿದರು.

ಶರಣಮ್ಮ 

ಕೊಲೆ ಬಳಿಕ ನಾಟಕವಾಡಿದ್ದ ಶರಣಮ್ಮ

ಬಸವರಾಜು ಕೊಲೆಗೆ ಒಂದು ತಿಂಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ. ಕೃತ್ಯದ ಬಳಿಕ ಪತಿ ಕಾಣೆಯಾಗಿರುವ ಬಗ್ಗೆ ಶರಣಮ್ಮ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದಾಗ ಕೊಲೆಯ ರಹಸ್ಯ ಬಯಲಾಯಿತು. ಬಿಳಿ ಬಣ್ಣದ ಕಾರ್​ನಲ್ಲಿ ಮೃತದೇಹ ಸಾಗಿಸಿರುವ ದೃಶ್ಯ ಕೂಡ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.