ADVERTISEMENT

ಪರೀಕ್ಷೆ ಇಲ್ಲದೆಯೇ ಮನೆಗೆ ತೆರಳಲು ಅವಕಾಶ

ಸಾಂಸ್ಥಿಕ ಕ್ವಾರಂಟೈನ್ ನಿಯಮ ಬದಲಿಸಿದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 20:14 IST
Last Updated 28 ಮೇ 2020, 20:14 IST
ಕ್ವಾರಂಟೈನ್ ಮುದ್ರೆ ಹಾಕುತ್ತಿರುವ ಸಿಬ್ಬಂದಿ (ಪ್ರಾತಿನಿಧಿಕ ಚಿತ್ರ)
ಕ್ವಾರಂಟೈನ್ ಮುದ್ರೆ ಹಾಕುತ್ತಿರುವ ಸಿಬ್ಬಂದಿ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿಸೋಂಕಿನ ಲಕ್ಷಣಗಳು ಗೋಚರಿಸದಿದ್ದಲ್ಲಿ ಇನ್ನು ಮುಂದೆ ಕೋವಿಡ್‌ ಪರೀಕ್ಷೆ ಮಾಡದೆಯೇ ಮನೆಗೆ ಕಳುಹಿಸಲುಆರೋಗ್ಯ ಇಲಾಖೆ ನಿರ್ಧರಿಸಿದೆ. ‌

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಕಳೆದ ವಾರವಷ್ಟೇ ಇಲಾಖೆ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 14 ದಿನಗಳಿಂದ 7 ದಿನಕ್ಕೆ ಇಳಿಕೆ ಮಾಡಿತ್ತು. ಆದರೆ, ಮನೆಗೆ ತೆರಳಿದ ಬಳಿಕ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕಿತ್ತು. ಈಗ ಮನೆಯ ಕ್ವಾರಂಟೈನ್‌ ಅವಧಿಯನ್ನೂ 7 ದಿನಗಳಿಗೆ ಇಳಿಕೆ ಮಾಡಲಾಗಿದೆ.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಕೋವಿಡ್‌ ಪರೀಕ್ಷೆ ಮಾಡುತ್ತಿದ್ದರಿಂದ ಪರೀಕ್ಷಾ ವರದಿ ವಿಳಂಬವಾಗುತ್ತಿತ್ತು. ಇದರಿಂದ ಸೋಂಕು ಲಕ್ಷಣ ಇರುವವರು ವರದಿಗಾಗಿ ಎದುರುನೋಡಬೇಕಾಗಿತ್ತು. ಹಾಗಾಗಿ ಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ಲಕ್ಷಣಗಳನ್ನು ಹೊಂದಿರದವರಿಗೆ ಕೋವಿಡ್‌ ಪರೀಕ್ಷೆಯ ವಿನಾಯಿತಿ ನೀಡಲಾಗಿದೆ.60 ವರ್ಷ ಮೇಲ್ಪಟ್ಟವರು, ಮಧುಮೇಹ, ಉಸಿರಾಟದ ತೊಂದರೆ, ಅಸ್ತಮಾ, ಹೃದಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ, ಮನೆ ಕ್ವಾರಂಟೈನ್ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಕೋವಿಡ್‌ 19 ಕಾರ್ಯಪಡೆಯ ಶಿಫಾರಸಿನ ಅನುಸಾರ ಈ ನಿರ್ಧಾರ ಕೈಗೊಳ್ಳಲಾಗಿದೆ.ಲಕ್ಷಣ ಕಾಣಿಸಿಕೊಳ್ಳದಿದ್ದಲ್ಲಿ ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ, ನಿಗಾ ಇರಿಸಲಾಗುವುದು. ಇದರಿಂದ ಕೋವಿಡ್ ಪರೀಕ್ಷೆ ವರದಿಯನ್ನು ಬೇಗ ನೀಡಲು ಸಾಧ್ಯವಾಗಲಿದೆ’ ಎಂದು ಜಾವೇದ್ ಅಖ್ತರ್ ತಿಳಿಸಿದರು.

‘ಕೆಲವು ಕೋವಿಡ್‌ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಶೀಘ್ರವಾಗಿ ವರದಿ ನೀಡಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಪ್ರತ್ಯೇಕ ಆಸ್ಪತ್ರೆಯನ್ನು ಗುರುತಿಸಿ, ವರದಿಗಳು ಆದಷ್ಟು ಬೇಗ ತಲುಪಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.