ಬೆಂಗಳೂರು: ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಶುಕ್ರವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಡಾಕ್ಟರೇಟ್ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ‘ಅನಂತನಾಗ್ ಅವರು ಚಿತ್ರರಂಗ ಪ್ರವೇಶಿಸಿ 50 ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ತನ್ನ ಗೌರವ ಹೆಚ್ಚಿಸಿಕೊಂಡಿದೆ’ ಎಂದು ಹೇಳಿದರು.
‘ನೇರ ನಡೆಯ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿರುವ ಅನಂತನಾಗ್ ಅವರು, ಈ ದೇಶ ಕಂಡ ಅತ್ಯುತ್ತಮ ನಟ. ಅನಂತನಾಗ್ ಮತ್ತು ಶಂಕರನಾಗ್ ಅವರು ರಾಮಕೃಷ್ಣ ಹೆಗಡೆ ಅವರ ಮೂಲಕ ರಾಜಕೀಯದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು’ ಎಂದು ನೆನಪಿಸಿಕೊಂಡರು.
ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅನಂತನಾಗ್, ‘ಬಾಲ್ಯದ 12 ವರ್ಷವನ್ನು ಆನಂದ ಆಶ್ರಮದಲ್ಲಿ ಕಳೆದೆ. ನಾನು ಏನನ್ನಾದರೂ ಸಾಧಿಸಿದ್ದರೆ ಆಶ್ರಮದಲ್ಲಿ ಕಲಿತ ಶಿಕ್ಷಣವೇ ಕಾರಣ’ ಎಂದು ಹೇಳಿದರು.
‘ಪ್ರಶಸ್ತಿ ಮತ್ತು ಗೌರವಗಳಿಗೆ ಲಾಬಿ ನಡೆಯುವುದುನ್ನು ನೋಡಿ ಯಾವುದೇ ಗೌರವ ಸ್ವೀಕರಿಸಬಾರದು ಎಂದುಕೊಂಡಿದ್ದೆ. ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡುವ ಪ್ರಸ್ತಾಪ ಬಂದಾಗ ಹಲವು ಬಾರಿ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ಸ್ವೀಕರಿಸಲು ಒಪ್ಪಿಕೊಂಡೆ’ ಎಂದರು. ಪತ್ನಿ ಗಾಯತ್ರಿ, ಮಗಳು ಅತಿಥಿ ಮತ್ತು ಅಳಿಯ ವಿವೇಕ್ ಜತೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.