ADVERTISEMENT

ವ್ಯಸನಿಗಳ ಮನಪರಿವರ್ತನೆಗೆ ‘ನವಚೇತನ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ಬ್ಯಾಡರಹಳ್ಳಿ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನವಚೇತನ’ ಕಾರ್ಯಕ್ರಮದಲ್ಲಿ ಯುವಕರು ಪಾಲ್ಗೊಂಡಿದ್ದರು
ಬ್ಯಾಡರಹಳ್ಳಿ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನವಚೇತನ’ ಕಾರ್ಯಕ್ರಮದಲ್ಲಿ ಯುವಕರು ಪಾಲ್ಗೊಂಡಿದ್ದರು   

ಬೆಂಗಳೂರು: ಮಾದಕ ವಸ್ತು (ಡ್ರಗ್ಸ್) ಸಾಗಣೆ ಹಾಗೂ ಮಾರಾಟ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪಶ್ಚಿಮ ವಿಭಾಗದ ಪೊಲೀಸರು, ಮಾದಕ ವ್ಯಸನಿಗಳ ಮನಪರಿವರ್ತನೆಗಾಗಿ ‘ನವಚೇತನ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಮಾದಕ ವ್ಯಸನಕ್ಕೆ ಒಳಗಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿರುವ ಯುವಕರನ್ನು ಗುರುತಿಸಿರುವ ಪೊಲೀಸರು, ಅವರೆಲ್ಲರಿಗೆ ಮನೋವೈದ್ಯರಿಂದ ಪಾಠ ಮಾಡಿಸುತ್ತಿದ್ದಾರೆ. ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ಯುವಕರ ವರ್ತನೆಗಳ ಮೇಲೆ ಕಣ್ಣಿಡುತ್ತಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಸೋಮವಾರ ಮೊದಲ ಬಾರಿಗೆ ಆಯೋಜಿಸಿದ್ದ ‘ನವಚೇತನ’ ಕಾರ್ಯಕ್ರಮದಲ್ಲಿ 83 ಯುವಕರು ಪಾಲ್ಗೊಂಡಿದ್ದರು.

ಡ್ರಗ್ಸ್‌ನಿಂದ ಆರೋಗ್ಯ ಮೇಲಾಗುವ ಪರಿಣಾಮಗಳೇನು ? ಡ್ರಗ್ಸ್‌ ವ್ಯಸನದಿಂದ ಹೊರಬರುವುದು ಹೇಗೆ ? ಉತ್ತಮ ಆರೋಗ್ಯ ಹೊಂದುವುದು ಹೇಗೆ ? ಎಂಬ ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ. ಜಿ.ಎನ್. ದಿವ್ಯಾ, ಡಾ. ವಿಕ್ರಮ್ ಅರುಣಾಚಲಂ, ಐ.ಕೆ. ಸಚಿನ್ ಹಾಗೂ ಕೆ. ರಾಘವ್ ಮಾತನಾಡಿದರು.

ADVERTISEMENT

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕರಾದ ಡಾ. ರಜನಿ, ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಮನೋರಂಜನ್ ಹೆಗ್ಡೆ ಭಾಗವಹಿಸಿದ್ದರು.

‘ಡ್ರಗ್ಸ್ ಜಾಲದಲ್ಲಿ ಸಿಲುಕಿರುವವರನ್ನು, ಅದರಿಂದ ಹೊರಗೆ ತರಬೇಕಿದೆ. ಹೀಗಾಗಿ, ಯುವಕರನ್ನು ಗುರುತಿಸಿ ಜಾಗೃತಿ ಮೂಡಿಸಲು ನವಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಡ್ರಗ್ಸ್ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಸಂಜೀವ್ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.