ADVERTISEMENT

ರಾಜಕಾರಣಿಗಳು ದಲಿತ ಕೇರಿ ಪ್ರವೇಶಿಸಲು ಬಿಡಬೇಡಿ: ಹೆಣ್ಣೂರು ಲಕ್ಷ್ಮೀನಾರಾಯಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:20 IST
Last Updated 19 ಮಾರ್ಚ್ 2021, 16:20 IST

ಬೆಂಗಳೂರು: ‘ಚುನಾವಣೆಯ ವೇಳೆ ರಾಜಕಾರಣಿಗಳಿಗೆ ದಲಿತ ಕೇರಿ ಪ್ರವೇಶಿಸಲು ಬಿಡಬೇಡಿ’ ಎಂದು ನ್ಯಾ. ಸದಾಶಿವ ವರದಿ ಜಾರಿ ಹೋರಾಟ ಸಮಿತಿಯ ಮಹಾ ಸಂಚಾಲಕ ಹೆಣ್ಣೂರು ಲಕ್ಷ್ಮೀನಾರಾಯಣ ಕರೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವು ವರದಿ ನೀಡಿ ವರ್ಷಗಳೇ ಉರುಳಿವೆ. ಸುದೀರ್ಘ ಹೋರಾಟ ನಡೆಸಿದರೂ ಒಳಮೀಸಲಾತಿ ಜಾರಿಯಾಗಿಲ್ಲ. ಇದಕ್ಕೆ ಆಳುವವರ ನಿರ್ಲಕ್ಷವೇ ಕಾರಣ. ವರದಿ ಜಾರಿಗೆ ನಮ್ಮ ಸರ್ಕಾರವು ಪ್ರಯತ್ನಿಸಲಿದೆ ಎಂದು ಬಿಜೆಪಿ ಮುಖಂಡರು ಶಿರಾ ವಿಧಾನಸಭಾ ಚುನಾವಣೆಯ ವೇಳೆ ಹೇಳಿದ್ದರು. ಅದು ಭರವಸೆಯಾಗಿಯೇ ಉಳಿದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಜೆಟ್‌ ಅಧಿವೇಶನ ಮುಗಿಯುವುದರೊಳಗೆ ಆಯೋಗದ ವರದಿ ಮಂಡಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಇದೇ 8ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಶ್ರೀರಾಮುಲು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಹೇಳಿದ್ದರು. ಇದೀಗ ಉಪ ಸಮಿತಿ ರಚಿಸುವುದಾಗಿ ಹೇಳುವ ಮೂಲಕ ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.