ADVERTISEMENT

‘ಪ್ರಾಜೆಕ್ಟ್ ಖುಷಿ’: ತೂಕ ಇಳಿಸಿಕೊಂಡ ಪೊಲೀಸ್‌ ಸಿಬ್ಬಂದಿ

ಪೊಲೀಸರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:20 IST
Last Updated 19 ಡಿಸೆಂಬರ್ 2025, 0:20 IST
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರ ಜತೆಗೆ ಸಿಬ್ಬಂದಿ ಹಾಗೂ ಹ್ಯಾಪಿಯಸ್ಟ್‌ ಹೆಲ್ತ್‌ ಸಂಸ್ಥೆಯ ಸಿಬ್ಬಂದಿ 
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರ ಜತೆಗೆ ಸಿಬ್ಬಂದಿ ಹಾಗೂ ಹ್ಯಾಪಿಯಸ್ಟ್‌ ಹೆಲ್ತ್‌ ಸಂಸ್ಥೆಯ ಸಿಬ್ಬಂದಿ    

ಬೆಂಗಳೂರು: ಹ್ಯಾಪಿಯಸ್ಟ್ ಹೆಲ್ತ್‌ ಸಂಸ್ಥೆ ಹಾಗೂ ನಗರ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗೆ ‘ಪ್ರಾಜೆಕ್ಟ್‌ ಖುಷಿ’ ಯೋಜನೆಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಜಾರಿ ಮಾಡಲಾಗಿತ್ತು. ಆ ಯೋಜನೆಯಲ್ಲಿ ಪೊಲ್ಗೊಂಡಿದ್ದವರ ಪೈಕಿ ಶೇ 60ರಷ್ಟು ಸಿಬ್ಬಂದಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ.

ಪ್ರಾಜೆಕ್ಟ್ ಖುಷಿಯಲ್ಲಿ ಭಾಗಿಯಾದವರು 0.5 ಕೆ.ಜಿಯಿಂದ 6.1 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಶೇ 61ರಷ್ಟು ಮಂದಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹ್ಯಾಪಿಯಸ್ಟ್ ಹೆಲ್ತ್‌ ಸಂಸ್ಥೆ ಹೇಳಿದೆ.

ಸೆ.11ರಂದು ಈ ಯೋಜನೆಗೆ ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ ಅವರು ಚಾಲನೆ ನೀಡಿದ್ದರು. ನಗರದ ಕಮಿಷನರ್ ಕಚೇರಿಯಲ್ಲಿ ಯೋಜನೆಯ ಸಮಾರೋಪ ಸಮಾರಂಭ ಗುರುವಾರ ನಡೆಯಿತು.

ADVERTISEMENT

‘ದೀರ್ಘಾವಧಿ ಕೆಲಸ, ಅಧಿಕ ಒತ್ತಡದ ವಾತಾವರಣ, ಅನಿಯಮಿತ ದಿನಚರಿ ಮತ್ತು ನಿದ್ರೆಯ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಉಂಟಾಗಿ ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದು ಸಿಬ್ಬಂದಿಯ ವೈಯಕ್ತಿಕ ಆರೋಗ್ಯ ಮತ್ತು ಕ್ಷೇಮದ ಮೇಲೆ ಪರಿಣಾಮ ಬೀರುತ್ತಿತ್ತು. ಸಿಬ್ಬಂದಿ ಕ್ಷೇಮಕ್ಕಾಗಿ ಹ್ಯಾಪಿಯಸ್ಟ್ ಹೆಲ್ತ್‌ ಸಹಯೋಗದಲ್ಲಿ ‘ಪ್ರಾಜೆಕ್ಟ್‌ ಖುಷಿ’ ಯೋಜನೆ ಜಾರಿ ಮಾಡಲಾಗಿತ್ತು’ ಎಂದು ಸೀಮಾಂತ್‌ಕುಮಾರ್ ಸಿಂಗ್ ಅವರು ಹೇಳಿದರು.

‘ಪ್ರತಿನಿತ್ಯ ಹುರಿದುಂಬಿಸಲು ದಿನದ ಸ್ಪೂರ್ತಿ, ವ್ಯಾಯಾಮದ ಸಲಹೆಗಳು, ವಿಡಿಯೊಗಳು ಹಾಗೂ ಆಹಾರ ಸಲಹೆಗಳನ್ನು ನೀಡಲಾಗುತ್ತಿತ್ತು. ಪ್ರತಿದಿನ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯ ಪಾಲ್ಗೊಳ್ಳುವಿಕೆ ಖಚಿತ ಪಡಿಸಿಕೊಳ್ಳಲಾಗುತ್ತಿತ್ತು’ ಎಂದು ಹೇಳಿದರು.

‘ಈ ಯೋಜನೆಯನ್ನು ಶಾಶ್ವತವಾಗಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಹ್ಯಾಪಿಯಸ್ಟ್‌ ಹೆಲ್ತ್ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.

ಯೋಜನೆಯ ನೋಡಲ್‌ ಅಧಿಕಾರಿ, ಎಲೆಕ್ಟ್ರಾನಿಕ್‌ ಉಪ ವಿಭಾಗದ ಡಿಸಿಪಿ ಎಂ.ನಾರಾಯಣ ಮಾತನಾಡಿ, ‘ಸಿಬ್ಬಂದಿಯ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ನಿದ್ರೆಯ ಪದ್ಧತಿಯೂ ಸುಧಾರಿಸಿದೆ. ಕೆಲಸದಲ್ಲಿ ಪಾಲ್ಗೊಳ್ಳುವಿಕೆ ಹಾಗೂ ತೊಡಗಿಸಿಕೊಳ್ಳುವಿಕೆ ಉತ್ತಮ ಆಗಿದೆ. ಜಂಕ್‌ ಫುಡ್‌ ತ್ಯಜಿಸಿ ಆರೋಗ್ಯಕರ ಆಹಾರ ಸೇವಿಸಲು ಸಿಬ್ಬಂದಿ ಆರಂಭಿಸಿದ್ದಾರೆ’ ಎಂದು ಹೇಳಿದರು. ಹ್ಯಾಪಿಯಸ್ಟ್‌ ಸಂಸ್ಥೆಯ ಅಶೋಕ್‌ ಸೂಟಾ ಮಾತನಾಡಿದರು.

ಸಿಬ್ಬಂದಿಯಲ್ಲಿನ ಬದಲಾವಣೆಯ ಅಂಶಗಳು

* ವಿಟಮಿನ್‌ ಬಿ–12 ಕೊರತೆ ಸರಿಪಡಿಸಿಕೊಂಡ ಸಿಬ್ಬಂದಿ 

* ಒತ್ತಡದ ಪರಿಸ್ಥಿತಿಯನ್ನು ಉತ್ತಮ ನಿರ್ವಹಣೆ* ಕೋಪಗೊಳ್ಳುವಿಕೆ ಕಡಿಮೆ 

* ಊಟದ ನಂತರ ಪ್ರತಿನಿತ್ಯ ನಡಿಗೆ

* ಜೀರ್ಣಕ್ರಿಯೆಯಲ್ಲಿ ಸುಧಾರಣೆ

* ದಿನವಿಡೀ ಚೈತನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.