ADVERTISEMENT

‘ಪ್ರಾಜೆಕ್ಟ್‌ ಶಿವಾಜಿನಗರಕ್ಕೆ’ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:24 IST
Last Updated 19 ಡಿಸೆಂಬರ್ 2020, 16:24 IST
ರಿಜ್ವಾನ್‌ ಅರ್ಷದ್‌ ಹಾಗೂ ಎನ್.ಮಂಜುನಾಥ್ ಪ್ರಸಾದ್ ಅವರು ಶಿವಾಜಿನಗರದ ಪೊಲೀಸ್ ವಸತಿಗೃಹಗಳ ಬಳಿಯ ಆವರಣ ಗೋಡೆಗೆ ಬಣ್ಣ ಬಳಿಯುವ ಮೂಲಕ ‘ಪ್ರಾಜೆಕ್ಟ್‌ ಶಿವಾಜಿನಗರ’ ಅಭಿಯಾನಕ್ಕೆ ಚಲನೆ ನೀಡಿದರು. ಬಿಬಿಎಂಪಿ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್ ಇದ್ದಾರೆ.
ರಿಜ್ವಾನ್‌ ಅರ್ಷದ್‌ ಹಾಗೂ ಎನ್.ಮಂಜುನಾಥ್ ಪ್ರಸಾದ್ ಅವರು ಶಿವಾಜಿನಗರದ ಪೊಲೀಸ್ ವಸತಿಗೃಹಗಳ ಬಳಿಯ ಆವರಣ ಗೋಡೆಗೆ ಬಣ್ಣ ಬಳಿಯುವ ಮೂಲಕ ‘ಪ್ರಾಜೆಕ್ಟ್‌ ಶಿವಾಜಿನಗರ’ ಅಭಿಯಾನಕ್ಕೆ ಚಲನೆ ನೀಡಿದರು. ಬಿಬಿಎಂಪಿ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್ ಖಾನ್ ಇದ್ದಾರೆ.   

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಸ ಸುರಿಯುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ತೆರವುಗೊಳಿಸಿ ಸುಂದರೀಕರಣಗೊಳಿಸುವ ‘ಪ್ರಾಜೆಕ್ಟ್‌ ಶಿವಾಜಿನಗರ’ (#Project Shivajinagar) ಅಭಿಯಾನಕ್ಕೆ ಶಾಸಕ ರಿಜ್ವಾನ್‌ ಅರ್ಷದ್‌ ಮತ್ತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಶನಿವಾರ ಚಾಲನೆ ನೀಡಿದರು.

ಶಿವಾಜಿನಗರದಲ್ಲಿ ಪೊಲೀಸ್‌ ವಸತಿ ಸಮುಚ್ಚಯದ ಬಳಿ ಕಸ ಸುರಿಯುತ್ತಿದ್ದ ಕೆಲವು ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ಅವುಗಳ ಪಕ್ಕದ ಗೋಡೆಗೆ ಶಾಸಕ ಹಾಗೂ ಆಯುಕ್ತರು ಸೇರಿ ಸುಣ್ಣ–ಬಣ್ಣ ಬಳಿದರು.

ರಿಜ್ವಾನ್ ಅರ್ಷದ್, ‘ಶಿವಾಜಿನಗರದಲ್ಲಿ ಕಸ ಸಮಸ್ಯೆ ತೀವ್ರವಾಗಿದೆ. ಜನ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ರಸ್ತೆ ಬದಿ ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಈ ಕ್ಷೇತ್ರವನ್ನು ಕಸಮುಕ್ತಗೊಳಿಸಲು ಸ್ಥಳೀಯರ ಸಹಕಾರ ಅಗತ್ಯ’ ಎಂದರು.

ADVERTISEMENT

ಎನ್‌.ಮಂಜುನಾಥ ಪ್ರಸಾದ್‌, ‘ಶಿವಾಜಿನಗರವನ್ನು ಸ್ವಚ್ಛ ಹಾಗೂ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸುವುದು ಜನರ ಕೈಯಲ್ಲೇ ಇದೆ. ಕಸದ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಸುಂದರೀಕರಿಸಿದ ಬಳಿಕ ಮತ್ತೆ ಅಲ್ಲಿ ಯಾರೂ ಕಸ ಸುರಿಯದಂತೆ ಸ್ಥಳೀಯರು ನೋಡಿಕೊಳ್ಳಬೇಕು. ಕಸ ಸಂಗ್ರಹಿಸಲು ಆಟೊಟಿಪ್ಪರ್‌ನಲ್ಲಿ ಮನೆ ಮನೆಗೆ ಬರುವ ಪಾಲಿಕೆ ಸಿಬ್ಬಂದಿಗೇ ಕಸವನ್ನು ನೀಡಬೇಕು. ಇದು ಎಲ್ಲರ ಸಾಮುದಾಯಿಕ ಜವಾಬ್ದಾರಿ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಕಸದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.