
ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆಯಲ್ಲಿ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಪಾವತಿಯ ಮರುಪರಿಶೀಲನೆ ಹಾಗೂ ಪರಿಷ್ಕರಣೆಯ ಸರ್ವೆ ನಡೆಸಲಾಗಿದೆ. ವ್ಯತ್ಯಾಸ ಕಂಡುಬಂದ ಸ್ವತ್ತುಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದರು.
ಹಲವು ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರ ನಗರ ಪಾಲಿಕೆಯ ಎಲ್ಲ ಕಂದಾಯ ವಿಭಾಗಗಳ 9 ಕಂದಾಯ ಅಧಿಕಾರಿಗಳ ತಂಡದಿಂದ 120ಕ್ಕೂ ಹೆಚ್ಚು ಸಿಬ್ಬಂದಿ 197 ಸ್ವತ್ತುಗಳ ಕಂದಾಯ ಪರಿಶೀಲನೆ ನಡೆಸಿದ್ದು, 147 ಸ್ವತ್ತುಗಳ ತೆರಿಗೆ ಸರಿಯಾಗಿದೆ. 49 ಕಟ್ಟಡಗಳ ಆಸ್ತಿ ತೆರಿಗೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಆ ಕಟ್ಟಡಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಜೀವನ್ಬಿಮಾ ನಗರ ಕಂದಾಯ ವಿಭಾಗ ಹಾಗೂ ದೊಮ್ಮಲೂರಿನ ಕಂದಾಯ ವಿಭಾಗಗಳ ಸ್ವತ್ತುಗಳ ಕಂದಾಯ ಪಾವತಿಯ ಮರುಪರಿಶೀಲನೆ ಮಾಡಿದಾಗ ₹7.21 ಕೋಟಿ ವ್ಯತ್ಯಾಸ ಕಂಡು ಬಂದಿದೆ. 15 ದಿನಗಳ ಕಾಲಾವಧಿಯಲ್ಲಿ ಸ್ವತ್ತಿನ ಮಾಲೀಕರು ಹಿಂಬರಹ ನೀಡಬೇಕು. ಆಕ್ಷೇಪಣೆಗಳು ಇಲ್ಲದಿದ್ದರೆ ಬೇಡಿಕೆ ನೋಟಿಸ್ ನೀಡಿ ಬಾಕಿ ತೆರಿಗೆಯನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.