ಬೆಂಗಳೂರು: ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಮೀನುಖರೀದಿ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಪ್ರಶಾಂತ್ (24) ಎಂಬುವರನ್ನು ಕೊಲೆ ಮಾಡಲಾಗಿದೆ.‘ಸ್ಥಳೀಯ ನಿವಾಸಿ ಪ್ರಶಾಂತ್ ಅವರನ್ನು ಭಾನುವಾರ ಸಂಜೆ 6.30ರ ಸುಮಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ್ದಾನೆ ಎನ್ನಲಾದ ಸ್ಥಳೀಯ ನಿವಾಸಿ ಅರ್ಜುನ್ (28) ಪರಾರಿಯಾಗಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ವ್ಯಕ್ತಿಯೊಬ್ಬರು ಅರ್ಜುನ್ ಮನೆ ಬಳಿ ಮೀನು ಮಾರಾಟ ಮಾಡಲು ಬಂದಿದ್ದರು. ಅದೇ ಸ್ಥಳಕ್ಕೆ ಬಂದಿದ್ದ ಪ್ರಶಾಂತ್, ಮೀನು ಖರೀದಿಸಲು ಮುಂದಾಗಿದ್ದರು. ಅದನ್ನು ನೋಡಿದ್ದ ಅರ್ಜುನ್, ‘ನನ್ನ ಮನೆ ಎದುರು ಮೀನು ಖರೀದಿಸಬೇಡ. ಇಲ್ಲಿಂದ ಹೊರಟು ಹೋಗು’ ಎಂದಿದ್ದ. ಅದನ್ನು ಪ್ರಶ್ನಿಸಿದ್ದ ಪ್ರಶಾಂತ್, ‘ಸಾರ್ವಜನಿಕ ರಸ್ತೆಯಲ್ಲಿ ಮೀನು ಖರೀದಿಸುತ್ತಿದ್ದೇನೆ. ಅದನ್ನು ಕೇಳಲು ನೀನ್ಯಾರು’ ಎಂದಿದ್ದ. ‘ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ ಅರ್ಜುನ್, ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಪ್ರಶಾಂತ್ ಅವರಿಗೆ ಚುಚ್ಚಿದ್ದ. ತೀವ್ರ ರಕ್ತಸ್ರಾವದಿಂದ ಪ್ರಶಾಂತ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.