ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬಿಸ್ ನಿರ್ಮೂಲನೆಗಾಗಿ ಪ್ರತ್ಯೇಕ ವಾಹನದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ತಿಳಿಸಿದರು.
‘ವಿಶ್ವ ಝೂನೋಸಿಸ್’ ದಿನದ ಭಾಗವಾಗಿ ರೇಬಿಸ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಜಾಗೃತಿ ಮೂಡಿಸುವ ವಾಹನಕ್ಕೆ ಸೋಮವಾರ ಅವರು ಚಾಲನೆ ನೀಡಿದರು.
ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ವಾಹನ ಸಂಚರಿಸುವುದರ ಜೊತೆಗೆ ಪಾಲಿಕೆ, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತದೆ. ರೇಬಿಸ್ ರೋಗ ನಿಯಂತ್ರಣದ ಕುರಿತು ಮಕ್ಕಳಲ್ಲಿ ಸಿಬ್ಬಂದಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಬಿಬಿಎಂಪಿಯ ಪಶುವೈದ್ಯಕೀಯ ಮಹಾವಿದ್ಯಾಲಯ- ಡಬ್ಲ್ಯುಒಎಎಚ್ ರೆಫೆರೆನ್ಸ್ ರೇಬಿಸ್ ರೋಗನಿರ್ಣಯ ಪ್ರಯೋಗಾಲಯ, ಚಾರ್ಲೀʼಸ್ ಮತ್ತು ಡಬ್ಲ್ಯುವಿಎಸ್- ಮಿಷನ್ ರೇಬಿಸ್ ಸಂಸ್ಥೆಗಳ ಜೊತೆಯಲ್ಲಿ 2030ರ ವೇಳೆಗೆ ಬೆಂಗಳೂರು ನಗರವನ್ನು ರೇಬಿಸ್ ಮುಕ್ತಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾ ಡಾ. ಚಂದ್ರಯ್ಯ, ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಮದನಿ, ಚಾರ್ಲೀʼಸ್ ರೆಸ್ಕ್ಯೂ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಸುಧಾ ನಾರಾಯಣನ್, ಮಿಷನ್ ರೇಬಿಸ್ ಸಂಸ್ಥೆಯ ನಿರ್ದೇಶಕ ಡಾ. ಬಾಲಾಜಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.