ADVERTISEMENT

ರೈಲ್ವೆ ಹುದ್ದೆ ಗಿಟ್ಟಿಸಲು ನಕಲಿ ನೇಮಕಾತಿ ಪತ್ರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 22:27 IST
Last Updated 11 ಜನವರಿ 2020, 22:27 IST

ಬೆಂಗಳೂರು: ರೈಲ್ವೆ ಇಲಾಖೆಯ ಸಹಾಯಕ ಸ್ಟೇಷನ್ ಮಾಸ್ಟರ್ ಹುದ್ದೆ ಗಿಟ್ಟಿಸಲು ಅಭ್ಯರ್ಥಿಯೊಬ್ಬ ನಕಲಿ ನೇಮಕಾತಿ ಆದೇಶ ಪತ್ರ ಸೃಷ್ಟಿಸಿದ್ದು, ಈ ಸಂಬಂಧ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನೈರುತ್ಯ ರೈಲ್ವೆಯ ಸಿಬ್ಬಂದಿ ವಿಭಾಗದ ಸಹಾಯಕ ಅಧಿಕಾರಿ ನಾಗಲತಾ ಗುರುಪ್ರಸಾದ್ ಅವರು ನಕಲಿ ನೇಮಕಾತಿ ಆದೇಶ ಪತ್ರದ ಸಮೇತ ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಪತ್ರ ಸೃಷ್ಟಿಸಿದವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

’ಇದೇ 10ರಂದು ಬೆಳಿಗ್ಗೆ ನಾಗಲತಾ ಅವರ ಕಚೇರಿಗೆ ಬಂದಿದ್ದ ಮಹಾರಾಷ್ಟ್ರದ ಸಂದೀಪ್ ಅನ್ನಾ ಜಲ್ಟೆ ಎಂಬಾತ ನೇಮಕಾತಿ ಆದೇಶ ಪತ್ರ ನೀಡಿದ್ದ. ಅದನ್ನು ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಬಳಿವೇ ನಾಗಲತಾ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ರೈಲ್ವೆ ಇಲಾಖೆಗೆ ವಂಚಿಸುವ ಉದ್ದೇಶದಿಂದ ಈ ಪತ್ರ ಸೃಷ್ಟಿಸಲಾಗಿದೆ. ಈ ಪತ್ರ ನೀಡಿದವರು ಯಾರು ಎಂಬ ಬಗ್ಗೆ ಸಂದೀಪ್ ಅವರಿಂದ ಮಾಹಿತಿ ಪಡೆಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.