ಬೆಂಗಳೂರು: ರಸ್ತೆಯಲ್ಲಿ ತನ್ನ ಪತ್ನಿಯನ್ನು ಬೆನ್ನಟ್ಟಿ ಚಾಕುವಿನಿಂದ ಇರಿದು ಕೊಂದಿರುವ ಆರೋಪಿ ಮಂಜುನಾಥ್ ಎಂಬಾತ, ಕೊಲೆ ಬಳಿಕ ರಾಜಗೋಪಾಲನಗರ ಠಾಣೆಗೆ ಬಂದು ಶರಣಾಗಿದ್ದಾನೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಂಜುನಾಥ್, ತುಮಕೂರು ಜಿಲ್ಲೆಯ ಹೇಮಾ (32) ಎಂಬುವರನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
‘ದಂಪತಿ ನಡುವೆ ಮಂಗಳವಾರ ರಾತ್ರಿ ಜಗಳ ಶುರುವಾಗಿತ್ತು. ಮಂಜುನಾಥ್, ಮನೆಯಲ್ಲೇ ಪತ್ನಿ ಮೇಲೆ ಹಲ್ಲೆ ಮಾಡಲಾರಂಭಿಸಿದ್ದ. ಆತನಿಂದ ತಪ್ಪಿಸಿಕೊಂಡಿದ್ದ ಹೇಮಾ, ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಓಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಬೆನ್ನಟ್ಟಿದ್ದ ಮಂಜುನಾಥ್, ನಡುರಸ್ತೆಯಲ್ಲೇ ಹೇಮಾ ಅವರಿಗೆ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವದಿಂದಾಗಿ ಹೇಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ, ಚಾಕು ಸಮೇತ ಠಾಣೆಗೆ ಬಂದು ಆರೋಪಿ ಶರಣಾಗಿದ್ದಾನೆ. ಕೊಲೆಗೆ ಕಾರಣ ಗೊತ್ತಾಗಿಲ್ಲ’ ಎಂದೂ ತಿಳಿಸಿದರು.
ಪತಿ ವಿರುದ್ಧ ದೂರು ನೀಡಿದ್ದ ಪತ್ನಿ; ‘ಮಂಜುನಾಥ್, ಟೆಂಪೋ ಚಾಲಕನಾಗಿದ್ದ. ಹೇಮಾ, ಗಾರ್ಮೆಂಟ್ಸ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ದಂಪತಿ ನಡುವೆ ಹಲವು ಬಾರಿ ಜಗಳ ಆಗಿತ್ತು. ಪತಿ ವಿರುದ್ಧವೇ ಪತ್ನಿ ಠಾಣೆಗೆ ದೂರು ನೀಡಿದ್ದರು. ಹಿರಿಯರ ಸಂಧಾನದ ಬಳಿಕ ದಂಪತಿ ಒಟ್ಟಿಗೆ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.