ಬೆಂಗಳೂರು: ‘ಲಾಕ್ಡೌನ್ ಸಂದರ್ಭದಲ್ಲಿ ದಿನಸಿ ತರಲು ಸಹಾಯ ಮಾಡುತ್ತಿದ್ದ ಚಾಲಕ ಸೇರಿ ನಾಲ್ವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ’ ಎಂದು ಆರೋಪಿಸಿ ನೈಜೀರಿಯಾದ ಯುವತಿಯೊಬ್ಬರು ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ.
'25 ವರ್ಷದ ಯುವತಿ, ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಅವರ ದೂರು ಆಧರಿಸಿ ಚಾಲಕ ಶಿವಶಂಕರ್, ಶ್ರೀಧರ್, ಗೋಪಿ, ಹರೀಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಎರಡು ತಿಂಗಳ ಹಿಂದಷ್ಟೇ ಯುವತಿಗೆ ಚಾಲಕ ಶಿವಶಂಕರ್ ಪರಿಚಯವಾಗಿತ್ತು. ಆಗಾಗ ಆಕೆ ಮನೆಗೂ ಆತ ಹೋಗಿ ಬರುತ್ತಿದ್ದ. ಸಲುಗೆಯೂ ಇತ್ತು. ಮೇ 10ರಂದು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿಗಳು, ಅತ್ಯಾಚಾರ ಎಸಗಿದ್ದಾರೆ. ಈ ಸಂಗತಿಯನ್ನು ಯುವತಿಯೇ ದೂರಿನಲ್ಲಿ ತಿಳಿಸಿದ್ದಾರೆ.’
‘ದೂರು ದಾಖಲಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿ ಹಾಗೂ ಚಾಲಕನ ನಡುವೆ ಹಣಕಾಸಿನ ವ್ಯವಹಾರವಿತ್ತು. ಅದೇ ವಿಚಾರಕ್ಕಾಗಿ ಗಲಾಟೆ ಆಗಿದ್ದು, ಯುವತಿ ಅತ್ಯಾಚಾರ ಆರೋಪ ಮಾಡುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಎಲ್ಲ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.