ADVERTISEMENT

ಗೋಪಾಲಯ್ಯ ವಿರುದ್ಧ ಎಸಿಬಿ ತನಿಖೆಗೆ ರವಿಕೃಷ್ಣಾ ರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 3:23 IST
Last Updated 23 ಜೂನ್ 2021, 3:23 IST

ಬೆಂಗಳೂರು: ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರಿಗೆ ನೀಡಲು ಪ್ರತಿ ಜಿಲ್ಲೆಯಿಂದ ₹ 5 ಲಕ್ಷ ಸಂಗ್ರಹಿಸಲಾಗಿದೆ ಎಂಬ ಅಧಿಕಾರಿಗಳ ದೂರವಾಣಿ ಸಂಭಾಷಣೆ ಕುರಿತು ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.

‘ಸಚಿವರಿಗೆ ಲಂಚದ ಮೊತ್ತ ಸಂಗ್ರಹಕ್ಕೆ ಸಂಬಂಧಿತ ಚರ್ಚೆ ಬಹಿರಂಗವಾದ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಚಿವರ ವಿರುದ್ಧವೇ ಲಂಚದ ಆರೋಪ ಕೇಳಿಬಂದಿದೆ. ಇದು, ಗಂಭೀರ ಪ್ರಕರಣ. ಮುಖ್ಯಮಂತ್ರಿಯವರು ತಕ್ಷಣವೇ ತನಿಖೆಗೆ ಆದೇಶಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ಕೆಳಗಿನಿಂದ ಮೇಲಿನವರೆಗೆ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಅಧಿಕಾರಿಗಳ ದೂರವಾಣಿ ಸಂಭಾಷಣೆ ಸಾಕ್ಷ್ಯ ನೀಡುತ್ತಿದೆ. ಸಂಭಾಷಣೆ ನಿಜವಾಗಿದ್ದಲ್ಲಿ ಗೋಪಾಲಯ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದೂ ಆಗ್ರಹಿಸಿದ್ದಾರೆ.

ADVERTISEMENT

ಲಂಚ ಪಡೆದವರಿಗೆ ಶಿಕ್ಷೆ ಇಲ್ಲವೆ: ಎಚ್‌ಡಿಕೆ ಪ್ರಶ್ನೆ

ಬೆಂಗಳೂರು:ಸಚಿವ ಗೋಪಾಲಯ್ಯ ಅವರಿಗೆಸಂಬಂಧಿಸಿದ ಆಡಿಯೊ ಪ್ರಕರಣದಲ್ಲಿ ಲಂಚ ಕೊಟ್ಟಿರಬಹುದಾದ ಅಧಿಕಾರಿಗಳಿಗೆ ಶಿಕ್ಷೆ ಇದ್ದರೆ, ಪಡೆದಿರುವವರಿಗೆ ಶಿಕ್ಷೆಯೇ ಇಲ್ಲವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಂಗಳವಾರ ಟ್ವೀಟ್‌ ಮಾಡಿರುವ ಅವರು, ‘ದೂರವಾಣಿ ಕರೆಯ ರೆಕಾರ್ಡಿಂಗ್‌ ಬಹಿರಂಗವಾದ ಬಳಿಕ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದಿದೆ. ಈ ಕ್ರಮ ಭ್ರಷ್ಟಾಚಾರದ ವಿರುದ್ಧವೋ ಅಥವಾ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ ಎಂಬ ಕಾರಣಕ್ಕೊ’ ಎಂದು ಕೇಳಿದ್ದಾರೆ.

ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.