ADVERTISEMENT

ಬೆಂಗಳೂರು: ತಮಿಳುನಾಡಿನಿಂದ ತಂದಿದ್ದ ₹ 20 ಲಕ್ಷ ಮೌಲ್ಯದ ರಕ್ತಚಂದನ ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:39 IST
Last Updated 30 ಅಕ್ಟೋಬರ್ 2022, 4:39 IST
ಶ್ರೀರಾಮಪುರ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ರಕ್ತಚಂದನ ತುಂಡುಗಳು
ಶ್ರೀರಾಮಪುರ ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ರಕ್ತಚಂದನ ತುಂಡುಗಳು   

ಬೆಂಗಳೂರು: ತಮಿಳುನಾಡಿನಿಂದ ರಕ್ತಚಂದನ ತುಂಡುಗಳನ್ನು ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.

‘ಬೊಮ್ಮನಹಳ್ಳಿ ನಿವಾಸಿ ಇಮ್ತಿಯಾಜ್ ಪಾಷಾ ಹಾಗೂ ತಮಿಳುನಾಡು ಕೃಷ್ಣಗಿರಿಯ ಸಯ್ಯದ್ ನೂರುದ್ದೀನ್ ಬಂಧಿತರು. ಇವರಿಬ್ಬರಿಂದ ಸುಮಾರು ₹ 20 ಲಕ್ಷ ಮೌಲ್ಯದ 399 ಕೆ.ಜಿ. ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಓಕಳಿಪುರ–ರಾಜಾಜಿನಗರ ಪ್ರಮುಖ ರಸ್ತೆಯಲ್ಲಿರುವ ರೇಷ್ಮೆ ಭವನದ ಎದುರು ಅ. 16ರಂದು ನಿಂತಿದ್ದ ಆರೋಪಿಗಳು, ಬ್ಯಾಗ್ ಹಿಡಿದುಕೊಂಡಿದ್ದರು. ಅವರಿಬ್ಬರ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ರಕ್ತಚಂದನ ಮಾರಲು ಬಂದಿರುವುದಾಗಿ ತಪ್ಪೊಪ್ಪಿಕೊಂಡರು. ಬ್ಯಾಗ್‌ಗಳಲ್ಲಿ ರಕ್ತಚಂದನದ ಸಣ್ಣ ತುಂಡುಗಳಿದ್ದವು’ ಎಂದು ತಿಳಿಸಿದರು.

ADVERTISEMENT

‘ಆರೋಪಿಗಳು, ಕೃಷ್ಣಗಿರಿಯ ಜಮೀನೊಂದರ ಶೆಡ್‌ನಲ್ಲಿ ರಕ್ತಚಂದನ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದರು. ಅಲ್ಲಿಂದಲೇ ತುಂಡುಗಳನ್ನು ನಗರಕ್ಕೆ ತಂದು ಮಾರುತ್ತಿದ್ದರು. ಶೆಡ್‌ನಲ್ಲಿದ್ದ ತುಂಡುಗಳನ್ನೂ ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.