ADVERTISEMENT

ಸಂಧಾನ: ಕಂದಾಯ ಸಿಬ್ಬಂದಿ ಪ್ರತಿಭಟನೆ ಅಂತ್ಯ

ತುಷಾರ್‌ ಗಿರಿನಾಥ್‌, ಮಹೇಶ್ವರ್‌ ರಾವ್‌ ಮಧ್ಯಪ್ರವೇಶ: ಸಮಸ್ಯೆಗೆ ಪರಿಹಾರ, ಸೂಕ್ತ ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 21:01 IST
Last Updated 27 ಡಿಸೆಂಬರ್ 2025, 21:01 IST
ತುಷಾರ್‌ ಗಿರಿನಾಥ್‌, ಎಂ. ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ ಜಿಬಿಎ ಕಂದಾಯ ವಿಭಾಗದ ನೌಕರರೊಂದಿಗೆ ಶನಿವಾರ ಸಭೆ ನಡೆಯಿತು
ತುಷಾರ್‌ ಗಿರಿನಾಥ್‌, ಎಂ. ಮಹೇಶ್ವರ್‌ ರಾವ್‌ ನೇತೃತ್ವದಲ್ಲಿ ಜಿಬಿಎ ಕಂದಾಯ ವಿಭಾಗದ ನೌಕರರೊಂದಿಗೆ ಶನಿವಾರ ಸಭೆ ನಡೆಯಿತು   

ಬೆಂಗಳೂರು: ‘ತಂತ್ರಾಂಶ ಸಮಸ್ಯೆ ಸರಿಪಡಿಸಬೇಕು, ಅಮಾನತು ಶಿಫಾರಸು ವಾಪಸ್‌ ಪಡೆಯಬೇಕು, ಮೇಲಧಿಕಾರಿ ಅವಾಚ್ಯ ಪದ ಬಳಕೆ ನಿಲ್ಲಿಸಬೇಕು’ ಎಂದು ಜಿಬಿಎ ನೌಕರರು ನಡೆಸುತ್ತಿದ್ದ ಮೌನ ಪ್ರತಿಭಟನೆಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ಅವರ ಮಧ್ಯಪ್ರವೇಶದಿಂದ ಅಂತ್ಯಗೊಂಡಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ–ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಮತ್ತು ಪದಾಧಿಕಾರಿಗಳೊಂದಿಗೆ ತುಷಾರ್‌ ಗಿರಿನಾಥ್‌ ಮತ್ತು ಮಹೇಶ್ವರ್‌ ರಾವ್‌ ಅವರು ಶನಿವಾರ ತುರ್ತು ಸಭೆ ನಡೆಸಿದರು.

ಇ–ಖಾತಾ ವಿತರಣೆ ತಂತ್ರಾಂಶದಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿದರೆ ಇ–ಖಾತಾ ತ್ವರಿತವಾಗಿ ವಿತರಣೆ ಮಾಡಲು ಸಾಧ್ಯ ಎಂದು ನೌಕರರು ಗಮನಕ್ಕೆ ತಂದರು. ಎನ್‌ಐಸಿ ಸಂಸ್ಥೆಯೊಂದಿಗೆ ಸಭೆ ನಡೆಸಿ ಇ–ಖಾತಾ ತಂತ್ರಾಂಶದಲ್ಲಿರುವ ನ್ಯೂನತೆಯನ್ನು ಸರಿಪಡಿಸುವುದಾಗಿ ಇಬ್ಬರು ಅಧಿಕಾರಿಗಳು ಭರವಸೆ ನೀಡಿದರು.

ADVERTISEMENT

ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಕಂದಾಯ ಅಧಿಕಾರಿ ವರಲಕ್ಷ್ಮಮ್ಮ ಅವರ ಅಮಾನತಿಗೆ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವವನ್ನು ಹಿಂಪಡೆಯಲು ನೌಕರರು ಮನವಿ ಮಾಡಿದರು. ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ನಂತರ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ಬೆಳಿಗ್ಗೆ 8.30ಕ್ಕೆ ನಡೆಸುವ ವಿಡಿಯೊ ಸಂವಾದದಲ್ಲಿ ನಿಂದನಾತ್ಮಕ ಪದಗಳನ್ನು ಬಳಸುತ್ತಿರುವ ಬಗ್ಗೆ ನೌಕರರು ಗಮನಕ್ಕೆ ತಂದರು. ‘ಮುನೀಶ್‌ ಅವರು ನಾಗರಿಕರಿಗೆ ತ್ವರಿತವಾಗಿ ಇ–ಆಸ್ತಿ ಪ್ರಕ್ರಿಯೆ ನಡೆಸಿಕೊಡಲು ಸೂಚಿಸುವಾಗ ಕೆಲವು ಪದಗಳನ್ನು ಬಳಸಿರಬಹುದು. ಕಂದಾಯ ಇಲಾಖೆಯ ಕಾರ್ಯಗಳ ಹಿತದೃಷ್ಟಿಯಿಂದ ಎಲ್ಲ ಅಧಿಕಾರಿ, ನೌಕರರು ಕಂದಾಯ ಇಲಾಖೆಯ ಮುಖ್ಯಸ್ಥರಾಗಿರುವ ವಿಶೇಷ ಆಯುಕ್ತರಿಗೆ ಸಹಕಾರ ನೀಡುವಂತೆ ಅಧಿಕಾರಿಗಳು ಕೋರಿದರು. ಹೀಗಾಗಿ ಮೌನ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು’ ಎಂದು ಸಂಘದ ಅಧ್ಯಕ್ಷರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.