ADVERTISEMENT

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 16:19 IST
Last Updated 9 ಸೆಪ್ಟೆಂಬರ್ 2024, 16:19 IST
ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಸೋಮವಾರ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ವ ವಲಯ ಆಯುಕ್ತೆ ಸ್ನೇಹಲ್‌ ವೀಕ್ಷಿಸಿದರು
ಶಿವಾಜಿನಗರದ ತಿಮ್ಮಯ್ಯ ರಸ್ತೆಯಲ್ಲಿ ಸೋಮವಾರ ಗುಂಡಿ ಮುಚ್ಚುವ ಕಾರ್ಯವನ್ನು ಪೂರ್ವ ವಲಯ ಆಯುಕ್ತೆ ಸ್ನೇಹಲ್‌ ವೀಕ್ಷಿಸಿದರು   

ಬೆಂಗಳೂರು: ‘ಒಂದು ವಾರದಲ್ಲಿ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಾಕೀತು ಮಾಡಿರುವ ಕಾರಣದಿಂದ ಬಿಬಿಎಂಪಿ ವಲಯ ಆಯುಕ್ತರು ರಸ್ತೆಗಳಿದು, ಗುಂಡಿ ಮುಚ್ಚುವ ಕಾರ್ಯದ ನೇತೃತ್ವ ವಹಿಸಿಕೊಂಡಿದ್ದಾರೆ.

ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ಶಿವಕುಮಾರ್‌ ಅವರು ರಸ್ತೆ ಗುಂಡಿ ಮುಚ್ಚದಿದ್ದರೆ ವಲಯ ಆಯುಕ್ತರು ಹಾಗೂ ಸಂಬಂಧಿಸಿದ ಎಂಜಿನಿಯರ್‌ಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಅವರ ಎಚ್ಚರಿಕೆಯ ಬೆನ್ನಲ್ಲೇ ಸೋಮವಾರದಿಂದ ವಲಯಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದೆ.

‘ಪೂರ್ವ ವಲಯ ವ್ಯಾಪ್ತಿಯಲ್ಲಿ 258.59 ಕಿ.ಮೀ ಮುಖ್ಯ ಹಾಗೂ ಉಪ ಮುಖ್ಯರಸ್ತೆ, ⁠1,394 ಕಿ.ಮೀ ಉದ್ದದ ರಸ್ತೆ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟು 1,652.59 ಕಿ.ಮೀ ಉದ್ದದ ರಸ್ತೆಗಳಿವೆ. ಒಂದು ವರ್ಷದಲ್ಲಿ 2,390 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ವಲಯ ಆಯುಕ್ತೆ ಸ್ನೇಹಲ್‌ ತಿಳಿಸಿದರು.

ADVERTISEMENT

‘ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಏಪ್ರಿಲ್‌ನಿಂದ ಈವರೆಗೆ ವಾರ್ಡ್ ರಸ್ತೆ ಗುಂಡಿಗಳ ಬಗ್ಗೆ 494 ದೂರು, ಪ್ರಮುಖ ರಸ್ತೆಗಳ ಗುಂಡಿಗಳ ಬಗ್ಗೆ 537 ದೂರುಗಳು ಬಂದಿವೆ. ವಾರ್ಡ್ ರಸ್ತೆಗಳಲ್ಲಿ 133 ಗುಂಡಿ ಹಾಗೂ ಪ್ರಮುಖ ರಸ್ತೆಗಳಲ್ಲಿ 132 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ 766 ಗುಂಡಿಗಳನ್ನು ಕಾಲ ಮಿತಿಯೊಳಗಾಗಿ ಮುಚ್ಚಲಾಗುವುದು ಎಂದು ಹೇಳಿದರು.

ಒತ್ತುವರಿ ತೆರವು: ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಪರಿಶೀಲನೆಯ ನಂತರ ತಿಮ್ಮಯ್ಯ ರಸ್ತೆ, ನ್ಯೂ ಮಾರ್ಕೆಟ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸ್ನೇಹಲ್‌ ಅವರು, ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ತೆರವಿಗೆ ಸೂಚಿಸಿದರು.

ಮುಖ್ಯ ಎಂಜಿನಿಯರ್‌ ಸುಗುಣಾ, ಕಾರ್ಯಪಾಲಕ ಎಂಜಿನಿಯರ್ ಸೈಫುದ್ದೀನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.