ಪ್ರಾತಿನಿಧಿಕ ಚಿತ್ರ
ಚಿತ್ರ ಕೃಪೆ: ಮೆಟಾ ಎಐ
ಬೆಂಗಳೂರು: ಸಮಾಜಮುಖಿ ಪತ್ರಿಕೆ ವತಿಯಿಂದ ನವೆಂಬರ್ 8 ಮತ್ತು 9ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಆವರಣದಲ್ಲಿ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಹಂ.ಪ. ನಾಗರಾಜಯ್ಯ, ‘ಕನ್ನಡ ಸಾಹಿತ್ಯದ ಗಂಭೀರ ಚರ್ಚೆ, ವಿಮರ್ಶೆ ಮತ್ತು ಸಂವಾದಕ್ಕೆ ಹೊಸ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ವಾಣಿಜ್ಯೀಕರಣದಿಂದ ಭಿನ್ನವಾದ, ಕೇವಲ ಸಾಹಿತ್ಯಿಕ ಮೌಲ್ಯಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದರು.
‘ಸೃಜನಶೀಲ ಮತ್ತು ವೈಚಾರಿಕ ಬರಹಗಾರರಿಗೆ ಸ್ಫೂರ್ತಿ ನೀಡುವುದರ ಜೊತೆಗೆ ಕನ್ನಡದ ಪ್ರಸ್ತುತ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ’ ಎಂದರು.
‘ಮುಖ್ಯ ಗೋಷ್ಠಿಯ ಜತೆಗೆ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ, ಕಾರ್ಯಾಗಾರ, ವಿಷಯ ಮಂಡನೆ ಮತ್ತು ಯುವ ಬರಹಗಾರರಿಗೆ ತರಬೇತಿ ಆಯೋಜಿಸಲಾಗಿದೆ. ಈ ವೇದಿಕೆಗಳಲ್ಲಿ ಸೃಜನಶೀಲ, ವೈಚಾರಿಕ, ಶಾಸ್ತ್ರೀಯ, ಕನ್ನಡೇತರ ಮತ್ತು ಅಂತರ್ಶಿಸ್ತೀಯ ವಿಷಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿವೆ. ಒಂದು ವೇದಿಕೆಯನ್ನು ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯ ಚರ್ಚೆಗಾಗಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.
ನೋಂದಣಿ: ‘ಸಮ್ಮೇಳನದಲ್ಲಿ ಸಾಹಿತಿಗಳು, ವಿಮರ್ಶಕರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಸೇರಿದಂತೆ ಯಾರು ಬೇಕಾದರೂ ಭಾಗವಹಿಸಬಹುದು. ಎಲ್ಲ ಪ್ರತಿನಿಧಿಗಳಿಗೆ ಎರಡು ದಿನಗಳ ಊಟ, ಉಪಾಹಾರದ ವೆಚ್ಚಕ್ಕಾಗಿ ₹ 300 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ’ ಎಂದರು.
‘ಸಮ್ಮೇಳನಕ್ಕೆ ಅಂದಾಜು ₹25 ಲಕ್ಷ ವೆಚ್ಚವಾಗಲಿದ್ದು, ಸರ್ಕಾರದ ಅನುದಾನವಿಲ್ಲದೆ, ಸಂಪೂರ್ಣವಾಗಿ ಸಾಹಿತ್ಯ ಪ್ರೇಮಿಗಳು ಮತ್ತು ದಾನಿಗಳ ದೇಣಿಗೆಯಿಂದ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.