ಬೆಂಗಳೂರು: ಮಂಡೂರು ಪಂಚಾಯಿತಿ ವ್ಯಾಪ್ತಿಯ ಬೊಮ್ಮೇನಹಳ್ಳಿ ಗ್ರಾಮದ ಪ್ರೆಸ್ಟಿಜ್ ಟ್ರ್ಯಾಂಕ್ವಿಲಿಟಿ ಅಪಾರ್ಟ್ಮೆಂಟ್ ನಿವಾಸಿಗಳು ಕೆಲವು ತಿಂಗಳಿಂದ ಕೋವಿಡ್ ನಿಯಂತ್ರಣಕ್ಕೆ ಸ್ವಯಂಪ್ರೇರಿತರಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ. ಪರಿಣಾಮ ಅಲ್ಲಿ ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದಕ್ಕೆ ಇಳಿಕೆಯಾಗಿದೆ.
38 ಎಕರೆ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ಸಮುಚ್ಛಯದಲ್ಲಿ 2,368 ಮನೆಗಳಿದ್ದು, 9 ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ 30ಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದರು. ಈ ವೇಳೆ ಅಪಾರ್ಟ್ಮೆಂಟ್ ಸಮುಚ್ಛಯ ಕ್ಷೇಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ ನಿವಾಸಿಗಳು ಕೋವಿಡ್ ಕಾರ್ಯಪಡೆ ರಚಿಸಿಕೊಂಡು, ವೈದ್ಯಕೀಯ ಸೌಲಭ್ಯ ಒದಗಿಸುವಿಕೆ, ಸಂಪರ್ಕ ಪತ್ತೆ, ದತ್ತಾಂಶ ಸಂಗ್ರಹ, ನಿವಾಸಿಗಳ ಜತಗೆ ಸಂವಹನ ಸಂಪರ್ಕ ಹಾಗೂ ಸೋಂಕು ನಿವಾರಕ ದ್ರಾವಣದ ಸಿಂಪಡಣೆ ನಡೆಸಿದ್ದಾರೆ. ಪರಿಣಾಮ ಅಲ್ಲಿ ಈಗ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.
‘ಹಲವು ಉತ್ಸಾಹಿಗಳ ಸಹಕಾರದಿಂದ ಕೋವಿಡ್ ಕಾಣಿಸಿಕೊಂಡ ಬಳಿಕ ತಂಡ ರಚಿಸಿಕೊಂಡೆವು. ಪ್ರತಿನಿತ್ಯ ಆನ್ಲೈನ್ ಸಭೆ ನಡೆಸಿ, ಕಾರ್ಯಯೋಜನೆ ರೂಪಿಸಲಾಗುತ್ತಿತ್ತು. ಲಾಕ್ಡೌನ್ ಅವಧಿಯಲ್ಲಿ ಕೂಡ ಸೋಂಕಿತರಿಗೆ ಚಿಕಿತ್ಸೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಯಿತು. ಸ್ವಂತ ಆಂಬುಲೆನ್ಸ್ ಕೂಡ ಖರೀದಿಸಿದೆವು. ಸಂಪರ್ಕಿತರು ಮನೆ ಕ್ವಾರಂಟೈನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಕೂಡ ನೋಡಿಕೊಂಡು, ಅವರಿಗೆ ಬೇಕಾದ ಸೌಲಭ್ಯ ಒದಗಿಸಿದೆವು’ ಎಂದು ಪ್ರೆಸ್ಟಿಜ್ ಟ್ರ್ಯಾಂಕ್ವಿಲಿಟಿ ಕೋವಿಡ್ ಕಾರ್ಯಪಡೆಯ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಮಂಜುನಾಥ ಪಾಟೀಲ ತಿಳಿಸಿದರು.
‘ಸಮಿತಿಯ ಸದಸ್ಯರಾಗಿದ್ದ ಕಿರಣ್ ಕುಮಾರ್ ಎಚ್.ಎಂ ಅವರು ಮನೆ ಕ್ವಾರಂಟೈನ್ ನಿಯಮ ಸಮರ್ಪಕವಾಗಿ ಪಾಲನೆಯಾಗುವಂತೆ ನೋಡಿಕೊಂಡರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.