
ಬೆಂಗಳೂರು: ನಟ ಶಂಕರ್ನಾಗ್ ಜನ್ಮದಿನದ ಪ್ರಯುಕ್ತ ನ.9ರಂದು 12ನೇ ವರ್ಷದ ‘ಚಾಲಕರ ದಿನಾಚರಣೆ’ ಆಯೋಜಿಸಲಾಗಿದೆ. ನಟಿ ರಚಿತಾ ರಾಮ್ ಅವರನ್ನು ‘ಆಟೊ ರಾಯಭಾರಿ’ಯಾಗಿ ಆಯ್ಕೆ ಮಾಡಲಾಗಿದೆ ಎಂದು ವಿವಿಧ ಆಟೊ ಚಾಲಕರ ಸಂಘಗಳ ಪದಾಧಿಕಾರಿಗಳು ತಿಳಿಸಿದ್ದಾರೆ.
ಜಯನಗರ 5ನೇ ಬ್ಲಾಕ್ನಲ್ಲಿರುವ ಶಾಲಿನಿ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದು ಪೀಸ್ ಆಟೊ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಘು ಎನ್. ನಾರಾಯಣಗೌಡ, ಆದರ್ಶ ಆಟೊ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ. ಮಂಜುನಾಥ್ ಗೌಡ, ಬಿ.ಪ್ಯಾಕ್ ಸದಸ್ಯ ರಾಘವೇಂದ್ರ ಪೂಜಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ. ಸಿ.ಎಸ್. ಅಶ್ವತ್ಥನಾರಾಯಣ್, ಸಾರಿಗೆ ಆಯುಕ್ತ ಎ.ಎಂ. ಯೋಗೇಶ್, ಡಿಜಿ ಐಜಿಪಿ ಎಂ.ಎ. ಸಲೀಂ ಪಾಲ್ಗೊಳ್ಳಲಿದ್ದಾರೆ. ಏಳು ಪ್ರಾಮಾಣಿಕ ಚಾಲಕರು, ಹಿರಿಯ ಹಾಗೂ ಮಹಿಳಾ ಆಟೋಚಾಲಕರ ಸೇವೆಯನ್ನು ಗೌರವಿಸಿ ಚಿನ್ನದ ಪದಕವನ್ನು ವಿತರಣೆ ಮಾಡಲಾಗುವುದು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸುಮಾರು 4 ಸಾವಿರ ಆಟೊ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ನಟ ಅಜಯ್ ರಾವ್ ಅವರು ಇಬ್ಬರು ಚಾಲಕರಿಗೆ ಧನಸಹಾಯ ಮಾಡಲಿದ್ದಾರೆ ಎಂದರು.
ಆಟೊ ಮತ್ತು ಟ್ಯಾಕ್ಸಿ ಚಾಲಕರಿಲ್ಲದೇ ಸಾರಿಗೆ ವ್ಯವಸ್ಥೆಯೇ ಇಲ್ಲ. ಚಾಲಕರನ್ನು ಗೌರವಿಸಲು ಪ್ರತಿವರ್ಷ ನಡೆಸುತ್ತಿರುವ ಚಾಲಕರ ದಿನಾಚರಣೆಯನ್ನು ಸರ್ಕಾರವೇ ಜವಾಬ್ದಾರಿ ಹೊತ್ತು ಆಚರಿಸಬೇಕು. ಈ ದಿನವನ್ನು ಸರ್ಕಾರ ಅಧಿಕೃತವಾಗಿ ‘ಚಾಲಕರ ದಿನ’ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಶಂಕರ್ನಾಗ್ ಅವರ ಜನ್ಮದಿನದ ಪ್ರಯುಕ್ತ ‘ಹಂಪಿ ರಥ’ದಂತೆ ಸಿಂಗಾರಗೊಂಡ ಆಟೊಗೆ ಚಾಲನೆ ನೀಡಲಾಗಿದೆ. ಶಂಕರ್ನಾಗ್ ಹಾಗೂ ವಿಷ್ಣವರ್ಧನ್ ಫೋಟೊ ಹೊತ್ತ ಈ ರಥ ಬೆಂಗಳೂರಿನಾದ್ಯಂತ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.