ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿರುವ ಪ್ರದೇಶಗಳಲ್ಲಿ 2018ರ ಆ.3ಕ್ಕಿಂತ ಮುಂಚೆ ನಿರ್ಮಿಸಿರುವ ಕಟ್ಟಡಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನಾಗರಿಕರಿಂದ ದಾಖಲೆ ಸಂಗ್ರಹಕ್ಕಾಗಿ ಮತ್ತೆ ಮೂರು ಸಹಾಯ ಕೇಂದ್ರಗಳನ್ನು ಆರಂಭಿಸಲಿದೆ.
ಸೋಮಶೆಟ್ಟಿಹಳ್ಳಿಯ ಅಂಬೇಡ್ಕರ್ ಸಮುದಾಯ ಭವನ, ಬ್ಯಾಲಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಿಂಗನಾಯಕನಹಳ್ಳಿಯ ಡಾ.ಅಂಬೇಡ್ಕರ್ ಸಮುದಾಯಭವನಗಳಲ್ಲಿ ಈ ಸಹಾಯಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದೇ 15ರಿಂದ ಈ ಸಹಾಯಕೇಂದ್ರಗಳು ಆರಂಭವಾಗಲಿವೆ. ಈ ಕೇಂದ್ರಗಳು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಕಾರ್ಯಾಚರಿಸಲಿವೆ.
ಬಡಾವಣೆಗಾಗಿ ಅಧಿಸೂಚನೆ ಹೊರಡಿಸಲಾದ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಿಕೊಂಡಿರುವವರು ಈ ಸಹಾಯಕೇಂದ್ರಗಳಲ್ಲದೇ ಆನ್ಲೈನ್ ಪೋರ್ಟಲ್ (jcc-skl.in) ಮೂಲಕವೂ ದಾಖಲೆಗಳನ್ನು ಸಲ್ಲಿಸಬಹುದು ಎಂದು ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಿತಿಯು ಈಗಾಗಲೇ ಮೇಡಿ ಅಗ್ರಹಾರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಹಾಯಕೇಂದ್ರವನ್ನು ಆರಂಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.