
ಬೆಂಗಳೂರು: ‘ಸಿದ್ದಲಿಂಗಯ್ಯ ಅವರ ಕಾವ್ಯ, ಬದುಕು, ಹೋರಾಟದ ದನಿಯನ್ನು ಪ್ರಸ್ತುತ ಸನ್ನಿವೇಶಕ್ಕೆ ಬಳಕೆ ಮಾಡಿಕೊಳ್ಳುವ ಜತೆಗೆ ಹೊಸ ತಲೆಮಾರಿಗೆ ಅವರ ಆಶಯವನ್ನು ತಿಳಿಸಿಕೊಡುವ ಕುರಿತು ಚಿಂತನೆ ನಡೆಸಬೇಕು’ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸಲಹೆ ನೀಡಿದರು.
ನಾಡೋಜ ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹೊಲೆಮಾದಿಗರ ಹಾಡು–50’, ‘ದಲಿತ ಕವಿ ಸಿದ್ಧಲಿಂಗಯ್ಯ–72’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಸಿದ್ದಲಿಂಗಯ್ಯ ಅವರು ನವ್ಯದ ಪ್ರಖರತೆಯಲ್ಲಿ ಬರೆದರು. ಎಲ್ಲವನ್ನೂ ಎದುರಿಸುವ ಶಕ್ತಿಯೂ ಅವರಲ್ಲಿತ್ತು. ಹೊಲೆ ಮಾದಿಗರ ಹಾಡನ್ನು ಗಟ್ಟಿ ದನಿಯಲ್ಲಿ ಓದಿ ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದರು. ಅವರು ಎಲ್ಲ ಜಾತಿಯ ಶೋಷಿತರು, ಕಾಯಕ ಜೀವಿಗಳ ದನಿಯಾಗಿ ಬರೆದು ಜಾಗೃತಿ ಮೂಡಿಸಿದ್ದಾರೆ. ಅವರಿಗೆ ದಲಿತ ಕವಿ ಎನ್ನುವ ಟ್ಯಾಗ್ ನೀಡುವುದು ಸರಿಯಲ್ಲ’ ಎಂದರು.
ವಿಧಾನ ಪರಿಷತ್ನ ಮಾಜಿ ಸದಸ್ಯ ಕೊಂಡಜ್ಜಿ ಮೋಹನ್ ಮಾತನಾಡಿ, ‘ಕಮ್ಯುನಿಸ್ಟ್ ಹೋರಾಟ, ಸಾಮಾಜಿಕ ಚಳವಳಿಗಳ ಭಾಗವೇ ಆಗಿದ್ದ ಸಿದ್ದಲಿಂಗಯ್ಯ ಬಳಿಕ ಬಿಜೆಪಿ ನಾಯಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರೂ ಕೊನೆವರೆಗೂ ಹೋರಾಟದ ಸಂಕೇತದಂತಿದ್ದರು‘ ಎಂದು ತಿಳಿಸಿದರು.
ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ‘ತಮ್ಮ ಹಾಡುಗಳ ಮೂಲಕವೇ ಸಿದ್ದಲಿಂಗಯ್ಯ ಅವರು ದಲಿತರ ಹೋರಾಟಗಳಿಗೆ ಶಕ್ತಿ ತುಂಬಿದರು. ಸಿನಿಮಾಗಳಲ್ಲೂ ಹಾಡು ಬರೆದು ಪ್ರೀತಿಯನ್ನೂ ಹಂಚಿದರು’ ಎಂದು ಹೇಳಿದರು.
ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ‘ಜನತಾ ಪಕ್ಷದ ಹೋರಾಟಗಳಿಗೆ ಸಿದ್ದಲಿಂಗಯ್ಯ ಅವರು ಗೀತೆಗಳನ್ನು ಬರೆಯುತ್ತಿದ್ದರು. ಇಂದಿರಾಗಾಂಧಿ ವಿರುದ್ದವಾಗಿ ಬರೆದ ಹಾಡುಗಳು ಜನಪ್ರಿಯವಾಗಿದ್ದವು’ ಎಂದು ನೆನಪಿಸಿಕೊಂಡರು.
ಸಾಹಿತಿ ಶೂದ್ರ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಸಿ. ನಾಗೇಂದ್ರಕುಮಾರ್, ಲೇಖಕ ಆರ್.ಜಿ.ಹಳ್ಳಿ ನಾಗರಾಜ್, ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ, ಗಾಯಕ ಅಪ್ಪಗೆರೆ ತಿಮ್ಮರಾಜು, ಕನ್ನಡ ಸಂಘದ ಸಂಚಾಲಕ ರುದ್ರೇಶ ಅದರಂಗಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.